ಮಸ್ಕಿ: ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿರುದ್ಧ ಹೈಕೋರ್ಟಿನಲ್ಲಿ ದಾಖಲಾಗಿದ್ದ ಚುನಾವಣೆ ತಕರಾರು ಅರ್ಜಿ ವಜಾಗೊಂಡಿದೆ. ಇದೀಗ ಪ್ರತಾಪಗೌಡ ಅವರು ಉಪ ಚುನಾವಣೆಯಲ್ಲಿ ಜಯಶಾಲಿ ಆದರೆ ಸಚಿವ ಸ್ಥಾನ ಸಿಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಹೇಳಿದರು.
ಪ್ರತಾಪಗೌಡ ಪಾಟೀಲ ಅವರ 66ನೇ ಜನ್ಮ ದಿನ ನಿಮಿತ್ಯ ಅವರ ಅಭಿಮಾನಿ ಬಳಗದವರು ಪಟ್ಟಣದ ನರಸನಗೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದಿಂದ ಸಾಕಷ್ಟು ಅನುದಾನ ತಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಈ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಬೈ ಎಲೆಕ್ಷನ್ ನಲ್ಲಿ ಅವರು ಜಯಶಾಲಿಯಾದರೆ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸಚಿವರಾದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಸರಕಾರ ನಾನಾ ಯೋಜನೆಯನ್ನು ಸದ್ಬಳಕೆ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ. ನಾವೆಲ್ಲರೂ ಅವರಿಗೆ ಕೈ ಜೋಡಿಸಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಬಸನಗೌಡ ಪೊಲೀಸ್ ಪಾಟೀಲ , ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದೆ. ಅದನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಬೇಕು ಎಂದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿರಲು ಕ್ರೀಡೆ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗಿಯಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಯಲ್ಲೋಜಿರಾವ್ ಕೊರೆಕರ್, ದೊಡ್ಡಪ್ಪ ಕಡಬೂರು, ಬಸ್ಸಪ್ಪ ಬ್ಯಾಳಿ, ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ವಿನಾಯಕ ಪಾಟೀಲ, ಸುರೇಶ ಹರಸೂರು, ಮಹಾಂತೇಶ ಪಾಟೀಲ ಗುಡದೂರು, ವಿರೂಪಾಕ್ಷಪ್ಪ ಎಸ್.ವಿ.ಟಿ ಸೇರಿದಂತೆ ಇನ್ನಿತರ ಮುಖಂಡರಿದ್ದರು.