ಗದಗ: ಇನ್ಮುಂದೆ ನೋ ಪೊಸ್ಟ್ ಆಫೀಸ್ ಓನ್ಲಿ ಬ್ಯಾಂಕ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗದಗನಲ್ಲಿ ಮಾತನಾಡಿದ ಅವರು, ಈಗಾಗಲೇ ವೃದ್ಧಾಪ್ಯ, ವಿಕಲಚೇತನ, ವಿಧವಾ ಸೇರಿದಂತೆ ಪಿಂಚಣಿಗೆ 7000 ಕೋಟಿ ಹಣ ನೀಡಲಾಗುತ್ತಿದೆ. ಇದರಲ್ಲಿ ಅಂದಾಜು 700 ಕೋಟಿಯಷ್ಟು ಹಣ ದುರುಪಯೋಗವಾಗುತ್ತಿದೆ. ಈ ನಿಟ್ಟಿನಲ್ಲಿ ಪೋಲಾಗುತ್ತಿರುವ ಸರ್ಕಾರದ ಹಣ ತಡೆಗಟ್ಟಲು ಇನ್ಮುಂದೆ ಪಿಂಚಣಿದಾರರ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಜಮೆ ಎಂದರು.
ಅರ್ಜಿ ಪಡೆಯದೇ ಪಿಂಚಣಿ ತಲುಪಿಸುವ ಕಾರ್ಯ
ಆಧಾರ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ವಯಸ್ಸು ದೃಢಪಡಿಸಿಕೊಂಡು 60 ವರ್ಷ ಆದವರ ವಿವರ ಪಡೆದು ಪಿಂಚಣಿ ಕೊಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಪಿಂಚಣಿದಾರರ ಮನೆ ಬಾಗಿಲಿಗೆ ಯೋಜನೆ ತಲುಪಿಸುವ ಕಾರ್ಯ ಸರ್ಕಾರ ಮಾಡಲು ಮುಂದಾಗಿದೆ. ಇದರಿಂದ ಯಾವುದೇ ಅರ್ಜಿ ಪಡೆಯದೇ ಪಿಂಚಣಿ ತಲುಪಿಸುವ ಜೊತೆಗೆ ಯೋಜನೆ ದುರ್ಬಳಕೆಗೂ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಕಂದಾಯ ಇಲಾಖೆಗೆ 6 ಲಕ್ಷ ಹೆಕ್ಟೇರ್ ಜಮೀನು
ಇದೇ ವೇಳೆ ಬಗರ್ ಹುಕುಂ ಸಾಗುವಳಿ ಬಗ್ಗೆ ಮಾತನಾಡಿ, ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಜಮೀನಿನ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಮದ್ಯೆ ವಿವಾದ ಇದೆ. ಇದರಲ್ಲಿ ಈಗಾಗಲೇ 6 ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ ಜಮೀನು ವಾಪಸ್ ಮರಳಲಿದೆ ಎಂದರು.
ಕೇಳಿದ್ದು 8071 ಕೋಟಿ, ಒಪ್ಪಿದ್ದು 628 ಕೋಟಿ
ಈಗಾಗಲೇ ರಾಜ್ಯದಲ್ಲಿ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ 9 ಎನ್.ಡಿ.ಆರ್.ಎಫ್ ತಂಡಗಳನ್ನು ಕಳುಹಿಸಿದೆ. ಈಗಾಗಲೇ ಪ್ರವಾಹಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 395 ಕೋಟಿ ಎರಡನೇ ಕಂತಿನ ಹಣ ನೀಡಿದೆ. ರಾಜ್ಯದಲ್ಲಿ ಪ್ರವಾಹಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ 8071 ಕೋಟಿ ಹಣಕಾಸಿನ ನೆರವು ನೀಡುವಂತೆ ಕೇಂದ್ರಕ್ಕೆ ಕೇಳಲಾಗಿತ್ತು. ಆದರೆ ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ 628 ಕೋಟಿ ಮಾತ್ರ ರಾಜ್ಯಕ್ಕೆ ನೆರವು ಸಿಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 3,31,000 ಹೆಕ್ಟೇರ್ ಕೃಷಿ ಭೂಮಿ, 32,976 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರವಾಹದಿಂದ ಹಾನಿಗೀಡಾಗಿದೆ. 10998 ಮನೆಗಳು ಹಾಗೂ 14182 ಕಿ.ಮಿ ರಸ್ತೆ ಹಾನಿಗೀಡಾಗಿದೆ. 1200 ಸೇತುವೆಗಳಿಗೆ ಹಾನಿಯಾಗಿದ್ದು 3168 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.