ಹಾವೇರಿ: ಕಳೆದ ಒಂದುವರೆ ತಿಂಗಳಿಗೂ ಅಧಿಕ ದಿನಗಳಿಂದ ಲಾಕ್ ಡೌನ್ ಮುಂದುವರೆದಿದ್ದು, ಇದರ ಪರಿಣಾಮ ಬಹುತೇಕ ವಲಯಕ್ಕೆ ಬೀರಿದೆ. ಅದರಲ್ಲೂ ರೈತರನ್ನಂತೂ ಕೊರೋನಾ ಕಂಗಾಲಾಗಿಸಿದೆ. ಒಂದೆಡೆ ಸೂಕ್ತ ಬೆಲೆ ಸಿಗದೇ ಪರದಾಟ, ಜೊತೆಗೆ ಕೆಲವು ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಂತಾಗಿರುವುದು. ಇದರಿಂದಾಗಿ ರೈತ ವಲಯ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲೊಬ್ಬ ರೈತ ತಾನು ಬೆಳೆದ ಫಸಲನ್ನು ನಾಶ ಪಡಿಸಿದ ಘಟನೆ ನಡೆದಿದೆ.
ಮೆಣಸಿನಕಾಯಿ ಬೆಳೆ ಬೆಳೆದು ನಿಂತ ಜಮೀನಿನಲ್ಲಿ ಕುರಿ ಹಾಗೂ ದನಕರುಗಳನ್ನು ಬಿಟ್ಟು ಬೆಳೆಯನ್ನು ನಾಶಪಡಿಸಲಾಗಿದೆ. ಹಾವೇರಿ ತಾಲೂಕಿನ ಹಿರೆಲಿಂಗದಹಳ್ಳಿಯ ಗ್ರಾಮದ ರೈತ ಪಕ್ಕಿರಪ್ಪ ಮುದಿಗೌಡರ ಮೆಣಸಿನಕಾಯಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಬೆಳೆ ನಾಶ ಮಾಡಿ ಅಸಹಾಯಕನಾಗಿದ್ದಾನೆ.
ಹಾವೇರಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬ್ಯಾಡಗಿ ಮೆಣಸಿನಕಾಯಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಾಗುತ್ತದೆ. ಆದರೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಕೂಡ ಕೊರೋನಾ ಎಫೆಕ್ಟ್ ನಿಂದ ಬಂದ್ ಆಗಿರುವುದು, ಹಾಗೂ ಸೂಕ್ತ ಧಾರಣೆ ಇಲ್ಲದೇ ಇರುವುದು ರೈತನ ಈ ಸ್ಥಿತಿಗೆ ಕಾರಣ.