ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ ನದಿಗೆ ಅಣೆಕಟ್ಟುನಿರ್ಮಿಸಿ ಕೂಡು ಕಾಲುವೆ ಮುಖಾಂತರ 1.72 ಟಿ ಎಂ ಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ, ಕೂಡು ಕಾಲುವೆ ಮುಖಾಂತರ 2.18 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಲಪ್ರಭಾ ನದಿಗೆ ತಿರುಗಿಸುವ ಬಂಡೂರಿ ನಾಲಾ ತಿರುವು ಯೋಜನೆಗೂ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಹುವರ್ಷದ ಹೋರಾಟ
ರಾಜ್ಯದ ಪಾಲಿನ ಕುಡಿಯುವ ನೀರನ್ನ ಪಡೆಯಲು ಎರಡು ದಶಕಗಳ ಕಾಲದಿಂದ ಹೋರಾಟ ನಡೆಯುತ್ತ ಬಂದಿತ್ತು. ಗೋವಾ ರಾಜ್ಯ ಸರ್ಕಾರವು ಪ್ರತಿ ಸಲ ತಗಾದೆ ತೆಗೆಯುತ್ತ, ವ್ಯಾಜ್ಯವನ್ನು ಸುಪ್ರಿಂಕೋರ್ಟ್ ಮೆಟ್ಟಿಲಿಗೆ ಒಯ್ಯುತ್ತ ಬಂದಿತ್ತು. ಈ ವ್ಯಾಜ್ಯವನ್ನು ನ್ಯಾಯ ಮಂಡಳಿಗೆ ಒಪ್ಪಿಸಿದ ನಂತರ ವಾದ-ವಿವಾದಗಳು ನಡೆದು, ಅಂತಿಮದಲ್ಲಿ ಸಮಾಧಾನಕರ ಎಂಬಂತಹ ಆದೇಶ ಬಂದಿತ್ತು. ಆದೇಶ ಬಂದು ಎರಡು ವರ್ಷವಾದರೂ ಕೇಂದ್ರ ಹಲವು ಇಲಾಖೆಗಳ ಅನುಮತಿ ಪಡೆಯುವುದು ತಡವಾಗಿತ್ತು. ಈಗ ದಾರಿ ಸುಗಮವಾಗಿದೆ.
ಹಣಕಾಸು ಅನುದಾನ ಎಲ್ಲಿ?
ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಭಿನಂದಿಸಿದ್ದಾರೆ. ಆದರೆ, ಆಡಳಿತಾತ್ಮಕ ಅನುಮೋದನೆಯಷ್ಟೇ ಸಾಕಾಗುವುದಿಲ್ಲ, ಹಣಕಾಸು ಅನುಮೋದನೆ ಸಿಗಬೇಕು. ಬಜೆಟ್ಟಿನಲ್ಲಿ ಯೋಜನೆಗೆ ಬೇಕಾಗುವಷ್ಟು ಅನುದಾನ ಮೀಸಲಿಟ್ಟಿಲ್ಲ. ಸದ್ಯ ರಾಜ್ಯ ಸರ್ಕಾರದ ಬೊಕ್ಕಸ ಸುಭದ್ರವಾಗಿಲ್ಲ. ಅದಕ್ಕೆ ಈ ಕುರಿತು ಸಚಿವ ರಮೇಶ್ ಜಾರಕಿಹೊಳಿ ಮಾತನ್ನೇ ಆಡಿಲ್ಲ.
ಆಡಳಿತಾತ್ಮಕ ಅನುಮೋದನೆ ತೋರಿಸುತ್ತ ಜನರನ್ನು ದಾರಿ ತಪ್ಪಿಸುವ ಸಾಧ್ಯತೆಯೇ ಹೆಚ್ಚಾಗಿವೆ. ಮುಂಬೈ ಕರ್ನಾಟಕದ ಜನಪ್ರತಿನಿಧಿಗಳು, ಕಳಸಾ-ಬಂಡೂರಿ ಹೋರಾಟಗಾರರು ಈ ಬಗ್ಗೆ ಒತ್ತಡ ಹೇರುವ ಕೆಲಸವನ್ನು ಈಗಿಂದಲೇ ಆರಂಭಿಸಬೇಕು.