ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಹೂಡಿಕೆಯು ನಷ್ಟವನ್ನು ತಪ್ಪಿಸುತ್ತದೆ. ಆದರೆ ಚಿನ್ನದ ಹೂಡಿಕೆ ಇತರ ಕೆಲವು ಹೂಡಿಕೆಗಳಿಗಿಂದ ಕಡಿಮೆ ಆದಾಯ ತಂದು ಕೊಡುತ್ತದೆ.

ಮುಂಬೈ: ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸುವ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆ ಅಥವಾ ಚಿನ್ನ ಖರೀದಿ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಪರಂಪರಾಗತವಾಗಿ ಚಿನ್ನದ ಮೇಲೆ ಆಕರ್ಷಣೆ ಹೆಚ್ಚು ಮತ್ತು ಅದರ ಮೌಲ್ಯ ಇಳಿಯಲಾರದು ಎಂಬ ನಂಬಿಕೆಯಿದೆ.

ಭಾರತೀಯರ ಪಾಲಿಗೆ ಸಾರ್ವಕಾಲಿಕ ಹಾಗೂ ಸುರಕ್ಷಿತ ಹೂಡಿಕೆ ಎಂದರೆ ಚಿನ್ನ ಎಂಬ ಮಾತು ಒಂದು ನಂಬಿಕೆಯಾಗಿದೆ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಚಿನ್ನ ಮಾತ್ರ ಎಲ್ಲರನ್ನೂ ಕೈ ಹಿಡಿಯುತ್ತದೆ ಎಂಬ ನಂಬಿಕೆ ದೇಶದ ಜನರದ್ದು. ಹೀಗಾಗಿ ಪ್ರತಿಯೊಬ್ಬರೂ ಚಿನ್ನವನ್ನು ಕೂಡಿಟ್ಟುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸದ್ಯ ಇದಕ್ಕೆ ಉತ್ತರವೂ ಸಿಕ್ಕಿದೆ.

2019ರ ಜುಲೈನಿಂದ ಇಲ್ಲಿಯವರೆಗೆ 10 ಗ್ರಾಮ್‌ ಚಿನ್ನದ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 10 ಗ್ರಾಮ್‌ಗೆ ಇದ್ದ ಬೆಲೆ ರೂ. 39,000 ರಷ್ಟಿತ್ತು. ಈ ವರ್ಷ ಇದರ ಬೆಲೆ ರೂ. 49 ಸಾವಿರದಷ್ಟಾಗಿದೆ. ಈ ಬೆಲೆ ಸದ್ಯ ಏರಿಕೆ ಕಾಣುತ್ತಿದೆ. ಇದುವರೆಗೆ ಚಿನ್ನದ ಕಡೆ ತಲೆ ಹಾಕದಿದ್ದವರೂ, ನಷ್ಟದ ಪ್ರಮಾಣ ಕಡಿಮೆಯಿರುವ ಚಿನ್ನದತ್ತ ಮುಖ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ.

ಚಿನ್ನಕ್ಕೆ ಆದ್ಯತೆ ಏಕೆ?

ಇಲ್ಲಿ ಒಂದು ಉದಾಹರಣೆ ಹೇಳಬಹುದು. ನೋಟು ಅಮಾನ್ಯೀಕರಣ (ಡಿಮಾನಟೈಸೇಸನ್) ಸಂದರ್ಭದಲ್ಲಿ ನಗದು ಶೇಖರಿಸಿದವರಿಗಿಂತ ಚಿನ್ನದ ರೂಪದಲ್ಲಿ ಸಂಪತ್ತು ಶೇಖರಿಸಿದವರು ನಿರಾಳರಾಗಿದ್ದರು. ಅಮೆರಿಕಾದ ಡಾಲರ್ ಅಶಕ್ತವಾಗುತ್ತಿರುವುದರಿಂದ ಇದರ ಪರಿಣಾಮ ಶೇರು ಮಾರುಕಟ್ಟೆಗಳ ಮೇಲೂ ಆಗಬಹುದು. ಆಗ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ದೊಡ್ಡ ಲಾಭ ಸಿಗದಿದ್ದರೂ ನಷ್ಟವಂತೂ ಸಂಭವಿಸುವುದಿಲ್ಲ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ವಿಶ್ವದ ಮೊದಲ ಐದು ಹೂಡಿಕೆ ಆದ್ಯತೆಗಳಲ್ಲಿ ಚಿನ್ನವೂ ಒಂದು. ಐದು ಹೂಡಿಕೆ ಆದ್ಯತೆಗಳೆಂದರೆ, ಉಳಿತಾಯ ಖಾತೆ, ಜೀವವಿಮೆ, ಸ್ಟಾಕ್ ಮತ್ತು ಶೇರುಗಳು,ಬಂಗಾರದ ನಾಣ್ಯ ಮತ್ತು ಬಂಗಾರದ ಆಭರಣ. ಹೂಡಿಕೆಗಳ ಪೈಕಿ 2016ರಲ್ಲಿ ಚಿನ್ನದ ಮೇಲೆ ಶೇ. 26ರಷ್ಟು ಹೂಡಿಕೆ ಆಗಿದ್ದರೆ , ಆ ಪ್ರಮಾಣ 2019ರ ಅಂತ್ಯದಲ್ಲಿ ಶೇ. 33ಕ್ಕೆ ಏರಿತ್ತು.

ಎಲ್ಲರಿಗೂ ಉಪಯೋಗವೇ?

ಚಿನ್ನದ ಮೇಲಿನ ಹೂಡಿಕೆ ಎಲ್ಲರಿಗೂ ಹೊಂದುವುದಿಲ್ಲ. ಇತರ ಹೂಡಿಕೆಗಳ ಬಗ್ಗೆ ಜ್ಞಾನ ಇಲ್ಲದವರು ಅಥವಾ ಅಂತಹ ಅವಕಾಶ ಸ್ಥಳೀಯವಾಗಿ ಲಭ್ಯ ಇರದವರಿಗೆ ಚಿನ್ನದ ಹೂಡಿಕೆ/ಖರೀದಿಯೇ ಸೂಕ್ತ. ಚಿನ್ನ ಸುಲಭವಾಗಿ ಮಾರಾಟಕ್ಕೆ ಸಿಗುವುದು ಕೂಡ ಇದಕ್ಕೆ ಕಾರಣ. ಆದರೆ ಸಣ್ಣ ಅವಧಿಯ ಹೂಡಿಕೆ ಅಷ್ಟು ಲಾಭಕರವಲ್ಲ. ಪೇಪರ್ ಗೋಲ್ಡ್ ಚಿನ್ನದ ಮೇಲೆಯೇ ಹೂಡಿಕೆ ಮಾಡುವುದಾದರೆ, ಪೇಪರ್ ಗೋಲ್ಡ್ ಆಯ್ಕೆ ಮಾಡಿಕೊಳ್ಳಬಹುದು. ಚಿನ್ನದ ಮೌಲ್ಯ ಆಧರಿತ ಸಾಕಷ್ಟು ಮ್ಯುಚುವಲ್ ಫಂಡ್ ಹೂಡಿಕೆ ಇವೆ. ಭಾರತ ಸರ್ಕಾರದ ಚಿನ್ನದ ಬಾಂಡ್ ಖರೀದಿ ಲಾಭಕರವೂ ಹೌದು, ಸುರಕ್ಷಿತವೂ ಹೌದು. ಇದರ ಮೇಲೆ ತೆರಿಗೆ ಬೀಳುವುದಿಲ್ಲ ಮತ್ತು ಪ್ರತಿ ವರ್ಷ ಹೆಚ್ಚುವರಿ ಶೇ. 2.5 ಬಡ್ಡಿಯೂ ದೊರೆಯುತ್ತದೆ. ಇಂತಹ ಹೂಡಿಕೆ ಮಾಡಿದಾಗ ಕನಿಷ್ಠ 8 ವರ್ಷದವರೆಗಿನ ಹೂಡಿಕೆ ಲಾಭಕರ.

Leave a Reply

Your email address will not be published. Required fields are marked *

You May Also Like

ಪೋಸ್ಟ್ ಆಫೀಸ್ ಬ್ಯಾಂಕಿಂಗ್ ನಲ್ಲಿ : 500 ರೂ, ಬ್ಯಾಲೆನ್ಸ್​ ಕಡ್ಡಾಯ!

ಇನ್ಮುಂದೆ ನಿಮ್ಮ ಪೋಸ್ಟ್ ಆಫೀಸ್ ಬ್ಯಾಂಕಿಂಗ್ ಖಾತೆಯಲ್ಲಿ 500 ರೂಪಾಯಿ ಉಳಿತಾಯ ಕಡ್ಡಾಯವಾಗಿದೆ. ಒಂದು ವೇಳೆ ಅಷ್ಟು ಹಣ ಇಲ್ಲದಿದ್ರೆ ದಂಡ ಕಟ್ಟಬೇಕಾಗಿದೆ.

ಆರ್ಥಿಕತೆ ಸಹಜ ಸ್ಥಿತಿಗೆ ಬರುವ ಲಕ್ಷಣ ಕಾಣಿಸುತ್ತಿವೆ: RBI ಗವರ್ನರ್ ಶಶಿಕಾಂತ್ ದಾಸ್

ಆರ್.ಬಿ.ಐ ಬೆಳವಣಿಗೆ ಮತ್ತು ಹಣಕಾಸು ಸ್ಥಿರತೆಗೆ ಆದ್ಯತೆ ನೀಡಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆ…

ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ

ನಗರದ ಜನತಾ ಶಿಕ್ಷಣ ಸಮಿತಿಯ ಬನಶಂಕರಿ ಆರ್ಟ್ಸ್, ಕಾಮರ್ಸ್ ಮತ್ತು ಎಸ್.ಕೆ.ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ ಆಯೋಜಿಸಲಾಗಿದೆ.

ಅದ್ಭುತ ಕನಸುಗಾರ ಯುವ ಉದ್ಯಮಿ ಅಬ್ದುಲ್ ಖದೀರ್: ಜನಮನ್ನಣೆಯತ್ತ ಖದೀರ್, ಪರಿಸರ ಸ್ನೇಹಿ ಉದ್ಯಮದ ಖದರ್

ಸಮಯವನ್ನು ನಾವು ಬೆನ್ನತ್ತಿದಾಗ ಮಾತ್ರ ಸಾಧನೆ ನಮ್ಮ ಸಾಮಿಪ್ಯಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ತಪಸ್ಸಿನಂತೆ ಸಾಧನೆ ಜಪ ಮಾಡಿದ ಯುವಕ ಇದೀಗ ಯುವಶಕ್ತಿ ಪಾಲಿಗೆ ಚೈತನ್ಯದ ಚಿಲುಮೆಯಾಗಿದ್ದಾನೆ. ಮಾದರಿ ಉದ್ಯಮದ ಮೂಲಕ ಬಹುದೊಡ್ಡ ಉದ್ಯಮಿಯಾಗುವ ಲಕ್ಷಣ ಹೊಂದಿದ್ದಾನೆ.