ನವದೆಹಲಿ: ‘2021ರವರೆಗೂ ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಸುವುದು ಅಸಾಧ್ಯ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿಯ ಎದುರು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಂಶೋಧಕರು ಈ ಅಭಿಪ್ರಾಯ ತಿಳಿಸಿದರು.
ಇದೇ ಅಗಸ್ಟ್ 15ರೊಳಗೆ ಕೋರೊನಾ ಲಸಿಕೆ ಸಿದ್ಧ ಎಂದು ಐಸಿಎಂಆರ್ ಘೋಷಿಸಿದಾಗ ವ್ಯಾಪಕ ಟೀಕೆ ಕೇಳಿ ಬಂದಿದ್ದವು. ಲಸಿಕೆ ಸಂಶೋಧನೆಯಲ್ಲಿ ಹುಡುಗಾಟದ ಮಾತು ಬೇಡ ಎಂದು ಹಲವಾರು ಸಂಶೋಧಕರು ಎಚ್ಚರಿಸಿದ್ದರು. ಅಗಸ್ಟ್ 15ರ ಪ್ರಧಾನಿಯವರ ಭಾಷಣಕ್ಕೆ ಮಹತ್ವ ತಂದು ಕೊಡಲು ಈ ಮೂರ್ಖತನದ ನಿರ್ಧಾರ ಮಾಡಲಾಗಿದೆ ಎಂದೂ ಟೀಕೆಗಳು ಕೇಳಿ ಬಂದಿದ್ದವು.
ನಂತರ ಸ್ಪಷ್ಟನೆ ನೀಡಿದ್ದ ಐಸಿಎಂಆರ್, ಕೆಂಪುಪಟ್ಟಿಯ ನಿಧಾನಗತಿಯನ್ನು (ಅಧಿಕಾರಿಗಳ ವಿಳಂಬ ಶೈಲಿ) ತೊಡೆದು ಹಾಕಲು ಹಾಗೆ ದಿನಾಂಕ ಘೋಷಿಸಲಾಗಿತ್ತು ಎಂದಿತ್ತು.
ಐಸಿಎಂಆರ್ ನ ಎಡವಟ್ಟಿನಿಂದಾಗಿ ಸ್ಥಾಯಿ ಸಮಿತಿ ಇಂದು ಈ ಸಭೆ ಕರೆದು ಅಧಿಕಾರಿಗಳು ಮತ್ತು ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿತು.
ಜೈವಿಕ, ತಂತ್ರಜ್ಞಾನ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ, ಸಿಎಸ್ಐಆರ್ ಇಲಾಖೆಗಳ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆಗೆ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿರುವ ಕೆ. ವಿಜಯರಾಘವನ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.