ಬೆಂಗಳೂರು: ಕರ್ನಾಟಕವನ್ನು ಇಟಲಿ ಅಥವಾ ನ್ಯೂಯಾರ್ಕ್ ಮಾಡಬೇಡಿ. ರಾಜ್ಯದಲ್ಲಿ ಶಂಕಿತರು, ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ. ಉತ್ತಮ ಚಿಕಿತ್ಸೆ, ಆಂಬುಲೆನ್ಸ್, ಗೌರವಯುತ ಅಂತ್ಯಸಂಸ್ಕಾರಗಳು ಮಾನವ ಹಕ್ಕುಗಳು. ಜನರ ಅಪೇಕ್ಷೆ, ನಿರೀಕ್ಷೆಗಳನ್ನು ಗಮನದಲ್ಲಿರಿಸಿ ದೃಢ ಹೆಜ್ಜೆಗಳನ್ನಿಡಿ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ್ ಮುಖ್ಯಮಂತ್ರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿರುವುದನ್ನು ಟೀಕಿಸಿರುವ ಅವರು, ಕೊವಿಡ್ ನಿಯಂತ್ರಣ ಮತ್ತು ಚಿಕಿತ್ಸೆಯ ನಿರ್ವಹಣೆ ಕುರಿತು ಹಲವು ಸಲಹೆ ನೀಡಿದ್ದಾರೆ.
ಹಾಸಿಗೆ ಕೊರತೆ, ಅಂಬುಲೆನ್ಸ್ ಅಸಮರ್ಪಕ ಸೇವೆ ಮತ್ತು ಊಟದ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಲು ಅವರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಎಲ್ಲರಿಗೂ ಕೊವಿಡ್ ವಿಮೆ ಒದಗಿಸಬೇಕು, ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆ ತುಂಬಲು ಕೊವಿಡ್ ತುರ್ತು ನೇಮಕಾತಿ ಮಾಡಬೇಕು ಎಂದಿರುವ ಅವರು, ಮಾದರಿಗಳ ಪರೀಕ್ಷೆಯ ಫಲಿತಾಂಶಗಳು ವಿಳಂಬವಾಗದಂತೆ ನಿಗಾ ವಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಕೂಡ ಮಾಡಿರುವ ಅವರು ಇದನ್ನು ಜನರ ಗಮನಕ್ಕೂ ತಂದಿದ್ದಾರೆ.
