ಬೆಂಗಳೂರು: ಸಂದರ್ಭದ ಬಂಧಿಯಾಗಿ ಆಕೆ 3 ತಿಂಗಳು ಕಾಲ ತವರಲ್ಲೇ ಉಳಿಯಬೇಕಾಯಿತು. ಗಂಡ-ಮಗ ಬೆಂಗಳೂರಿನಲ್ಲಿ, ಆಕೆ ಚಂಡಿಗಢ್ ನಲ್ಲಿ. ಏನ್ ಜಗಳಾಡಿ ಹೋಗಿದ್ದರಾ? ಊಹೂಂ, ಸುಮ್ಮನೇ ವಾರದ ಮಟ್ಟಿಗೆ ಅಂತಾ ಹೋಗಿದ್ದರು.
ಯಾವ ಮುನ್ಸೂಚನೆ ನೀಡದೇ, ಜನರಿಗೆ ತಮ್ಮೂರಿಗೆ ತೆರಳುವ ಅವಕಾಶವನ್ನೂ ನೀಡದೇ ಏಕಾಏಕಿ ರಾತ್ರೋರಾತ್ರಿ ಲಾಕ್ ಡೌನ್ ಘೋಷಣೆಯಾದ ಪರಿಣಾಮ, ಯಾವ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಆಕೆಗೆ ತವರಿಂದ ಬೆಂಗಳೂರಿಗೆ ಬರಲಾಗಲಿಲ್ಲ.
ಅನ್-ಲಾಕ್ ನಂತರ ಸಂಚಾರ ಶುರುವಾದ ನಂತರ ಬೆಂಗಳೂರಿಗೆ ಬಂದರೆ ಪತಿರಾಯ ಬಾಗಲು ತೆಗೆಯುತ್ತಿಲ್ಲ. ಆಕೆಯ ಪಾಲಿಗೆ ಇದೊಂಥರಾ ಲಾಕ್ ಔಟ್! ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಿದು.
ಮೂರು ತಿಂಗಳು ನಂತರ ಮಗನನ್ನು ನೋಡಲು ಬಂದ ಪತ್ನಿಯನ್ನು ಪತಿ ಮನೆಯ ಹೊರಗೆ ನಿಲ್ಲಿಸಿದ್ದಾನೆ. ಕೊನೆಗೆ ಮಹಿಳೆ ತಾನು 14 ದಿನ ಮನೆಯಲ್ಲಿ ನಿಮ್ಮಿಬ್ಬರಿಂದ ದೂರವಿದ್ದು ಕ್ವಾರಂಟೈನ್ ನಲ್ಲಿರುತ್ತೇನೆ, ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ನಿಮ್ಮೊಂದಿಗೆ ಬೆರೆಯುತ್ತೇನೆ ಎಂದು ಕೇಳಿದರೂ ಪತಿ ಬಾಗಿಲು ತೆರೆದಿಲ್ಲ.
ಮಹಿಳೆ ವರ್ತೂರು ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಫೋನ್ ಮಾಡಿದರೆ, ಪತಿ ರಿಸೀವ್ ಮಾಡಿಲ್ಲ. ಕೊನೆಗೆ ಪೊಲೀಸರು ಬರಬಹುದೆಂದು ತಿಳಿದು ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಮಹಿಳೆಯನ್ನು ಆಕೆಯ ಸಂಬಂಧಿಕರ ಮನೆಯಲ್ಲಿರಿಸುವ ವ್ಯವಸ್ಥೆ ಮಾಡಿದ್ದಾರೆ.
ಲಾಕ್ ಡೌನ್ ಮತ್ತು ಕೊರೊನಾ ಈ ಎರಡೂ ಮಾಡಿದ ಎಡವಟ್ಟುಗಳು ಲಕ್ಷ ಲಕ್ಷ. ಈ ಪ್ರಕರಣದಲ್ಲಿ ಲಾಕ್ ಡೌನ್ ಮತ್ತು ಕೊರೋನಾ ತಾವು ಮಾತ್ರ ಜೋಡಿಯಾಗಿ, ಪತಿ-ಪತ್ನಿ ನಡುವೆ ಬಿರುಕು ಮೂಡಿಸಿವೆ.