ರಾಯಚೂರು: ಎನ್ ಆರ್ ಬಿ ಸಿ 5 ಕೆನಾಲ್ ಯೋಜನೆಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ಮಸ್ಕಿ ತಾಲೂಕಿನ ಎನ್ಆರ್ ಬಿ ಸಿ ಕೆನಾಲ್ ಹೋರಾಟ ಸಮಿತಿ ಮುಖಂಡರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಈ ಯೋಜನೆಯ ಡಿಪಿಆರ್ ವನ್ನು ಕೃಷ್ಣಭಾಗ್ಯ ಜಲ ನಿಗಮದ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಈ ಯೋಜನೆಗೆ ಮಂಜೂರಾತಿ ನೀಡಿಲ್ಲ. ಈ ಯೋಜನೆ ಜಾರಿಯಾದರೆ ರಾಯಚೂರು, ಕೊಪ್ಪಳ ಜಿಲ್ಲೆಗಳ 7 ಗ್ರಾಮಗಳ 72000 ಹೆಕ್ಟೇರ್ ಪ್ರದೇಶ ನೀರಾವರಿ ಪ್ರದೇಶ ಆಗಲಿದೆ. ಯೋಜನೆ ಮೊತ್ತ 2,755 ಕೋಟಿ ರೂ.ಅಂದಾಜಿಸಲಾಗಿದೆ. ಇದರ ಬಗ್ಗೆ ಮಾರ್ಚ 14ರಂದು ಮಸ್ಕಿ ಪಟ್ಟಣಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಆಗಮಿಸಿದಾಗ ಇದಕ್ಕೆ ಸ್ಪಂದಿಸಿ ಯೋಜನೆಯ ಡಿಪಿಆರ್ ಸೇರಿದಂತೆ ಇನ್ನಿತರ ಕಾಮಗಾರಿ ಆರಂಭಿಸಲು ಭರವಸೆ ನೀಡಿದ್ದರು. ಈ ಕೂಡಲೇ ಸರಕಾರ ಸಂಪುಟ ಸಭೆ ಕರೆದು ಈ ಯೋಜನೆಯನ್ನು ಮಂಜೂರಾತಿ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎನ್ಆರ್ಬಿಸಿ 5ಎ ಕೆನಾಲ್ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರವಾಪೂರ, ಅಯ್ಯನಗೌಡ ನಾಗರಬೆಂಚಿ, ನಾಗರೆಡ್ಡಪ್ಪ ದೇವರಮನಿ, ತಿಮ್ಮನಗೌಡ ಚಿಲ್ಕರಾಗಿ, ಮಲ್ಲಿಕಾರ್ಜುನ ಹೂವಿನಬಾವಿ, ಮಲ್ಲರೆಡ್ಡಪ್ಪ ಚಿಲ್ಕರಾಗಿ, ಅಜಯ ನಾಡಗೌಡ, ದೇವೇಂದ್ರಪ್ಪ ಕನಸಾಲಿ, ಗಂಗಪ್ಪ ಅಮಜಿನಗಡ, ಇನ್ನಿತರ ಇದ್ದರು.