ಬೆಂಗಳೂರು: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಹಲವರ ವಿಚಾರಣೆ ಕೂಡ ನಡೆಸಿದ್ದಾರೆ.
ಸದ್ಯ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೂರು ದಿನ ಮೊದಲೇ ತಮ್ಮ ಸಿಬ್ಬಂದಿ ಹಾಗೂ ಮನೆ ಕೆಲಸದವರಿಗೆ ಸಂಬಳ ಸೇರಿದಂತೆ ಇನ್ನಿತರ ಹಣವನ್ನು ಸಂದಾಯ ಮಾಡಿದ್ದರು ಎಂದು ತಿಳಿದು ಬಂದಿದೆ.
ಸಂಬಳ ನೀಡಿದ ಮೇಲೆ ಸಿಬ್ಬಂದಿಗಳಿಗೆ, ಇನ್ನು ಮುಂದೆ ನಾನು ಸಂಬಳ ನೀಡಲು ಆಗುತ್ತೋ, ಇಲ್ಲವೋ ಎಂದು ಮಾರ್ಮಿಕವಾಗಿ ಹೇಳಿದ್ದರು ಎಂದು ತನಿಖೆ ವೇಳೆ ತಿಳಿದಿದೆ. ಜೂ. 8ರಂದು ಸುಶಾಂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದರು. ಆಗಿನಿಂದ ಸುಶಾಂತ ಆಘಾತಕ್ಕೊಳಗಾಗಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅವರಿಗೆ ಈ ಘಟನೆ ಮತ್ತಷ್ಟು ಘಾಸಿ ಮಾಡಿತ್ತು. ಬಹುಕೋಟಿ ವೆಚ್ಚದ ವೆಬ್ ಸಿರೀಸ್ನಲ್ಲಿ ನಟಿಸುವುದರ ಕುರಿತು ಸುಶಾಂತ್, ಮಾಜಿ ಮ್ಯಾನೇಜರ್ ಜೊತೆ ಮಾತನಾಡಿದ್ದರು ಎನ್ನಲಾಗಿದೆ.
ನಟಿ ರಿಯಾ ಚರ್ಕವರ್ತಿ ಅವರಿಂದಲೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ಶೇಖರ್ ಕಪೂರ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.