ನವದೆಹಲಿ: ಲಡಾಖ್ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ಪೂರ್ವ ನಿಯೋಜಿತರಾಗಿ ಚೀನಾ ಸೈನಿಕರು ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಭಾರತ ಚೀನಾಕ್ಕೆ ಖಡಕ್ ಆಗಿ ತಿಳಿಸಿದೆ.
ಸೋಮವಾರ ರಾತ್ರಿ ಗಡಿಯಲ್ಲಿ ಎರಡು ರಾಷ್ಟ್ರಗಳ ಸೈನಿಕರ ಮಧ್ಯೆ ಘರ್ಷಣೆ ನಡೆದ ಬಳಿಕ ಬುಧವಾರ ಭಾರತದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ವೈ ಮಧ್ಯೆ ದೂರವಾಣಿ ಮಾತುಕತೆ ನಡೆದಿದೆ.
ಜೂ. 6 ರಂದು ನಡೆದ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ ವೇಳೆ ಎಲ್ಎಸಿಯಿಂದ ಸೇನೆ ಹಿಂದಕ್ಕೆ ಬರುವ ಸಂಬಂಧ ಮಾತುಕತೆ ನಡೆದಿತ್ತು. ಆದರೆ ಚೀನಾ ಸೇನೆ ಭಾರತದ ಎಲ್ಎಸಿ ಬಳಿ ಟೆಂಟ್ ನಿರ್ಮಿಸಿತ್ತು. ಆದರೆ, ಚೀನಾ ಟೆಂಟ್ ತೆರೆಯದೆ, ಈ ವಿಚಾರದ ಮಾತುಕತೆ ನಡೆದ ಸಂದರ್ಭದಲ್ಲಿಯೇ ಪೂರ್ವ ನಿಯೋಜಿತವಾಗಿ ದಾಳಿ ನಡೆಸಿದೆ. ಇದರಿಂದಾಗಿ ಸಾವು ನೋವು ಸಂಭವಿಸಿದೆ. ಈ ಘಟನೆಗೆ ಚೀನಾವೇ ನೇರ ಕಾರಣ ಎಂದು ಭಾರತ ತಿರುಗೇಟು ನೀಡಿದೆ.
ಅಲ್ಲದೇ, ಈ ಘಟನೆಯಿಂದ ದ್ವಿಪಕ್ಷೀಯ ಮಾತುಕತೆಯ ಮೇಲೆ ಪರಿಣಾಮ ಬೀರಿದೆ. ಜೂನ್ 6 ರಂದು ಕಮಾಂಡರ್ ಮಟ್ಟ ಮಾತುಕತೆಯ ವೇಳೆ ಏನು ನಿರ್ಧಾರ ಮಾಡಲಾಗಿದೆಯೋ ಅದನ್ನು ಎರಡು ದೇಶಗಳು ಪಾಲಿಸಬೇಕು. ಎರಡು ಕಡೆಯ ಸೈನಿಕರು ದ್ವಿಪಕ್ಷೀಯ ಒಪ್ಪಂದವನ್ನು ಪಾಲಿಸಬೇಕು ಎಂದು ಭಾರತ ಹೇಳಿದೆ.
ಭಾರತದ ಸೇನೆ ಎಲ್ಎಸಿ ದಾಟಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದೆ. ಭಾರತವು ಎಲ್ಲ ಒಪ್ಪಂದಗಳನ್ನು ಉಲ್ಲಂಘಿಸಿ ಕೃತ್ಯ ನಡೆಸಿದೆ. ಚೀನಾ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಚೀನಿ ಸೈನಿಕರ ಮೇಲೆ ಹಲ್ಲೆ ಎಸಗಿದವರ ವಿರುದ್ಧ ಭಾರತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸಬಾರದು ಎಂದು ಚೀನಾ ಹೇಳಿದೆ. ಸದ್ಯ ಎರಡು ದೇಶಗಳು ಯಾಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದು, ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.