ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ಪಕ್ಷ ಬೀಡುವು ಸನ್ನಿವೇಶ ಸೃಷ್ಟಿಯಾಯಿತು ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಆರೋಪಿಸಿದರು.
ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದಿಂದ ಮತ್ತು ಕಾಂಗ್ರೆಸ್ ಮೋಸ ಮಾಡಿದ್ದರಿಂದ ನಾವು ಪಕ್ಷ ಬಿಡಬೇಕಾಯಿತು.
ಪಕ್ಷ ಬಿಟ್ಟ ಯಾವ ಶಾಸಕರು ಕೂಡ ಬಿದಿಯಲ್ಲಿ ಇಲ್ಲ. ನಮ್ಮನ್ನು ನೋಡಿದರೆ ಬಿದಿಯಲ್ಲಿ ಇದ್ದಾರೆ ಎಂದು ಅನಿಸುತ್ತಿದೆಯಾ? ಎಂದು ಪ್ರಶ್ನಿಸಿದರು.
ಅನ್ಯಾಯವಾಗಲು ಸಿಎಂ ಬಿಡಲ್ಲ
ಆರ್.ಶಂಕರ್, ಎಂಟಿಬಿ ನಾಗರಾಜ, ವಿಶ್ವನಾಥ ಅವರಿಗೆ ಮೋಸವಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಆರ್.ಶಂಕರ್, ಎಂಟಿಬಿ ನಾಗರಾಜ, ವಿಶ್ವನಾಥ ತ್ಯಾಗ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಿಎಂ ಬಿಎಸ್ವೈ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಎಂಟಿಬಿಯವರಿಗೆ ಬಚ್ಚೆಗೌಡ ಕುಟುಂಬದಿಂದ ಅನ್ಯಾಯ ಆಗಿರುವುದು ನಿಜ. ಚುನಾವಣೆಯಲ್ಲಿ ಶರತ್ ಬಚ್ಚೆಗೌಡ ಸ್ಪರ್ಧೆ ಮಾಡದಂತೆ ಪಕ್ಷ ಸೂಚಿಸಿದರೂ ಸ್ಪರ್ಧೆ ಮಾಡಿದ್ದರಿಂದ ನಾಗರಾಜ ಸೋಲಬೇಕಾಯಿತು. ಯಡಿಯೂರಪ್ಪ ಅದನ್ನು ಸರಿಪಡಿಸುವರೆಂಬ ವಿಶ್ವಾಸವಿದೆ.
ಸಿದ್ದರಾಮಯ್ಯ ಅವಧಿಯಲ್ಲಿ ರಾಕೇಶ್ ಸುಪರ್ ಸಿಎಂ ಆಗಿದ್ರು
ರಾಜ್ಯದಲ್ಲಿ ಸಂವಿಧಾನಿಕವಾಗಿ ಯಡಿಯೂರಪ್ಪ ಹಾಗೂ ಅಸಂವಿಧಾನಿಕವಾಗಿ ವಿಜಯೇಂದ್ರ ಇಬ್ಬರು ಸಿಎಂ ಗಳು ಇದ್ದಾರೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರೀಯೇಯಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಇರುವಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ ಆರೋಪಿಸಲಾಗುತ್ತಿದೆ. ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆಂದು ಹೇಳಿದರು.
ಚುನಾವಣೆ ಸಮಯದಲ್ಲಿ ನಮ್ಮ ಗೆಲುವಿಗಾಗಿ ಕುಟುಂಬ ಸದಸ್ಯರೆಲ್ಲರೂ ದುಡಿದಿರುತ್ತಾರೆ. ಹೀಗಾಗಿ ಕೆಲವೊಂದು ಸಲಹೆ, ಸೂಚನೆ ಕೊಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೇ ನಮ್ಮ ಪರವಾಗಿ ಆಡಳಿತ ನಡೆಸುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸಲಹೆ ನೀಡಬಹುದು. ಅದನ್ನು ಸ್ವೀಕಾರ ಮಾಡಬಹುದು ಅಥವಾ ಬಿಡಬಹುದು ಎಂದರು.