ಬೆಂಗಳೂರು: ‘ಆರೋಗ್ಯ ಕರ್ನಾಟಕ’ಕ್ಕೆ ವೇದಿಕೆ ಕಲ್ಪಿಸಲಿರುವ “ಹೆಲ್ತ್ ರಿಜಿಸ್ಟರ್’ ಯೋಜನೆ ಅನುಷ್ಠಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮುನ್ನುಡಿ ಬರೆದರು.
ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಆರೋಗ್ಯ ವಲಯದ ತಜ್ಞರ ಜತೆ ಸಚಿವ ಸುಧಾಕರ್ ಮೊದಲ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹದಿನೆಂಟು ಮಂದಿ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಈಗಾಗಲೇ ಇಂಥ ಯೋಜನೆ ಜಾರಿಗೊಳಿಸಿರುವ ದೇಶಗಳಲ್ಲಿ ಅಳವಡಿಸಿಕೊಂಡಿರುವ ಪದ್ಧತಿ, ಯೋಜನೆ ಜಾರಿಗೆ ರಾಜ್ಯದಲ್ಲಿ ಎದುರಾಗುವ ಸವಾಲು, ಅಡ್ಡಿ- ಆತಂಕಗಳು, ಯೋಜನೆಯ ಸ್ವರೂಪ, ಮನೆ ಮನೆ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಿರುವ ಅಂಶಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಆರೋಗ್ಯ ಇಲಾಖೆಯ ನಾನಾ ವಿಭಾಗಗಳು ಈಗಾಗಲೇ ಹೊಂದಿರುವ ಮಾಹಿತಿ, ಖಾಸಗಿ ವಲಯದ ನೆರವು ಪಡೆಯುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಜ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ಆ ಮೂಲಕ ಸದೃಢ, ಆರೋಗ್ಯವಂತ ಕರ್ನಾಟಕ ರೂಪಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ಹೆಲ್ತ್ ರಿಜಿಸ್ಟರ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಇದನ್ನು ಸಾಕಾರಗೊಳಿಸಲು ತಜ್ಞರು ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಮೊದಲ ಸಭೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದರು.
ಸಭೆಯಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಪರಿಣಿತರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಯೋಜನೆ ರೂಪುರೇಷೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಭೆ ಬಳಿಕ ಸುಧಾಕರ್ ತಿಳಿಸಿದರು.
ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರಿಗೂ ಸರ್ಕಾರ ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ಸಿಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಯೋಜನೆ ವಿವರ ತಿಳಿದು ಮುಂದುವರಿಯಲು ಸೂಚನೆ ನೀಡಿದ್ದಾರೆ. ದೇಶದಲ್ಲೇ ಮೊದಲ ಸಲ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ. ನಮಗೆ ಇದೊಂದು ದೊಡ್ಡ ಸವಾಲು, ಅಸಾಧಾರಣ ಪ್ರಯತ್ನ ಎಂಬ ಅಂಶವೂ ಗಮನದಲ್ಲಿದೆ. ಇದು ಗಣತಿ ಮಾದರಿಯ ಮನೆ ಮನೆಗೂ ತೆರಳಿ ಮಾಹಿತಿ ಪಡೆಯಬೇಕಿರುವ ಕಾರ್ಯಕ್ರಮ. ಪ್ರಾಯೋಗಿಕವಾಗಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ವಿವರಿಸಿದರು.
ಹೆಲ್ತ್ ರಿಜಿಸ್ಟರ್ ಯೋಜನೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಮಾಹಿತಿ ಪಡೆಯುವುದು ದೊಡ್ಡ ಸವಾಲು. ಇದನ್ನು ನಿಭಾಯಿಸಲು ಖಾಸಗಿ ರಂಗದ ತಜ್ಞರು ಜತೆಗೆ ತಾಂತ್ರಿಕತೆಯ ನೆರವು ಅಗತ್ಯ. ಇವತ್ತಿನ ಸಂದರ್ಭದಲ್ಲಿ ಅನುದಾನ ಒದಗಿಸುವುದು ಕೂಡ ತ್ರಾಸದಾಯಕ ಸಂಗತಿ. ಅದಕ್ಕಾಗಿ ಕೈಗಾರಿಕೆಗಳವರ ನೆರವು ಪಡೆಯಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ರೂಪುರೇಷೆ ಇತ್ಯರ್ಥಪಡಿಸಲಾಗುತ್ತದೆ. ಒಮ್ಮೆ ನಮಗೆ ರಾಜ್ಯದ ಆರೂವರೆ ಕೋಟಿ ಜನರ ಮಾಹಿತಿ ಸಿಕ್ಕರೆ ಲಿಂಗ, ಪ್ರದೇಶ, ವಯೋಮಾನ ಆದಿಯಾಗಿ ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ವಿನ್ಯಾಸಗೊಳಿಸಬಹುದು. ಕೊರೋನಾ ನಂತರದ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮುನ್ನೆಲೆಗೆ ಬರವುದು ಅನಿವಾರ್ಯ ಎಂದರು.
ಈಗಾಗಲೇ ಇಸ್ರೇಲ್ ನಲ್ಲಿ ಜಾರಿಗೊಳಿಸಿರುವ ಇಂಥದ್ದೇ ಕಾರ್ಯಕ್ರಮ ಯಶಸ್ವಿಯಾಗಿದ್ದು ಪರಿಣಾಮಕಾರಿ ಆರೋಗ್ಯ ಸೇವೆ ನೀಡುತ್ತಿದೆ. ಅದನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿ ಈಗಾಗಲೇ ಲಭ್ಯವಿರುವ ದತ್ತಾಂಶವನ್ನು ಮೊದಲು ಬಳಕೆ ಮಾಡಿಕೊಳ್ಳಬಹುದು, ಅದರ ಜತೆಗೆ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯಲು ಯಾವ ಕ್ರಮ ಅಳವಡಿಸಿಕೊಳ್ಳಬೇಕು ಎಂಬುದನ್ನು ತಜ್ಞರು ವಿವರಿಸಿದರು. ಸರ್ಕಾರ ಕೈಗೊಂಡಿರುವ ಈ ಯೋಜನೆಯನ್ನು ಎಲ್ಲ ತಜ್ಞರು ಮುಕ್ತಕಂಠದಿಂದ ಶ್ಲಾಘಿಸಿ, ಎಂದೊ ಆಗಬೇಕಿದ್ದ ಈ ಕೆಲಸ ಕೊರೋನಾ ವಿರುದ್ಧದ ಹೋರಾಟ ನಡೆಸಿರುವ ಈಗಲಾದರೂ ಕೈಗೊಳ್ಳಲು ನಿರ್ಧರಿಸಿ ಸಚಿವ ಸುಧಾಕರ್ ಚಾಲನೆ ನೀಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ. ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗಿರೀಶ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಅವರಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಪ್ರಭುದೇವ್, ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞರಾದ ಡಾ. ಎಂ.ಕೆ. ಸುದ ರ್ಶನ್, ಹೆಸರಾಂತ ತಜ್ಞರಾದ ಡಾ. ವಿವೇಕ್ ಜವಳಿ, ಡಾ. ಶರಣ್ ಪಾಟೀಲ್, ಡಾ. ರಾಮಚಂದ್ರ, ಡಾ. ಸತೀಶ್ಬಾೇಬು, ಡಾ. ಸವಿತಾ, ಡಾ. ಅರವಿಂದ ಶೆಣೈ, ಡಾ. ದಿವಾಕರ್, ಡಾ. ಆಂಜಿನಪ್ಪ, ಡಾ. ಗಂಗಾಧರ್, ಡಾ. ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯೆಗಳು….
ಹೆಲ್ತ್ ರಿಜಿಸ್ಟರ್ ಬಹು ವರ್ಷಗಳ ನನ್ನ ಕನಸಿನ ಕೂಸು. ಆರೂವರೆ ಕೋಟಿ ಕನ್ನಡಿಗರಿಗೂ ಅಂತಾರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ಜನರು ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗಿಗಳಾಗಬೇಕು’ – ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ, ತಾಂತ್ರಿಕತೆ ಮತ್ತು ತಜ್ಞರ ಸಹಯೋಗದೊಂದಿಗೆ ಇಸ್ರೇಲ್ನ ಲ್ಲಿ ಜಾರಿಗೊಳಿಸಿರುವ ಆರೋಗ್ಯ ವ್ಯವಸ್ಥೆ ಜಗತ್ತಿಗೆ ಮಾದರಿ. ಅಂಥದ್ದೇ ಸಾಹಸಕ್ಕೆ ಕರ್ನಾಟಕ ಸರ್ಕಾರ ಕೈ ಹಾಕಿರುವುದು ಮಹತ್ವದ ಬೆಳವಣಿಗೆ. ಸರ್ಕಾರದ ಈ ಪ್ರಯತ್ನವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕೈಲಾದ ಎಲ್ಲ ಸಹಕಾರ ನೀಡಲಾಗುವುದು. – ಡಾ. ಶರಣ್ ಪಾಟೀಲ್, ಖ್ಯಾತ ಮೂಳೆ ತಜ್ಞ
ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಈ ಮಹತ್ವಾಕಾಂಕ್ಷಿ ಯೋಜನೆಗೆ ಕೈಜೋಡಿಸಬೇಕಿದೆ. ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಸಂಗ್ರಹ ಪೂರ್ಣಗೊಂಡರೆ ಆರೋಗ್ಯ ಸೇವೆಯಲ್ಲಿ ಅದ್ಬುತಗಳನ್ನು ಸೃಷ್ಟಿಸಬಹುದು. – ಡಾ. ವಿವೇಕ್ ಜವಳಿ, ಖ್ಯಾತ ಹೃದ್ರೊಗ ತಜ್ಞ

Leave a Reply

Your email address will not be published. Required fields are marked *

You May Also Like

ಬಿಎಂಟಿಸಿಗೆ ಡಿಜಿಟಲ್ ಸ್ಪರ್ಷ: ಡಿಜಿಟಲ್ ಹಣ ನೀಡಿ ಟಿಕೇಟ್ ಪಡೆಯಲು ಅವಕಾಶ

ಬೆಂಗಳೂರು: ಕೊರೊನಾ ಕಾಟದಿಂದಾಗಿ ಪ್ರಯಾಣಿಕರು ಹಾಗೂ ಸಿಬ್ಬಂಧಿಗಳ ಹಿತದೃಷ್ಟಿಯಿಂದ ಬಿಎಂಟಿಸಿ ಡಿಜಿಟಲ್ ಗೆ ಮಾರು ಹೋಗಿದೆ.ಫೋನ್…

ಗೋರ ಸೇನಾ ಸಂಘಟನೇ ವತಿಯಿಂದ ಪ್ರತಿಭಟನೆ- ಸಂಗೂರ ಸಕ್ಕರೆ ಕಾರ್ಖಾನೆ:ಲಾರಿ ಹಾಯ್ದು ಒರ್ವ ಕಾರ್ಮೀಕ ಸಾವೂ, ಇಬ್ಬರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿ ಹಾವೇರಿ: ಹಾವೇರಿ ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ದಿನಾಂಕ:09.01.2022 ರಾತ್ರಿ 2.00 ಗಂಟೆ…

ಆಲಮಟ್ಟಿಗೆ ಸಿಎಂ ಆಗಮನ – ಬಿಗಿ ಭದ್ರತೆ ನಿಯೋಜನೆ

ಆಲಮಟ್ಟಿ : ರಾಜ್ಯದ ದೊರೆ ಆಗಮನದ ಹಿನ್ನೆಲೆಯಲ್ಲಿ ಉದ್ಯಾನ ನಗರಿ ಆಲಮಟ್ಟಿ ಸಕಲ ಭದ್ರತಾ ಸಿದ್ದತೆಯೊಂದಿಗೆ…