ಬೆಂಗಳೂರು: ನಗರದಲ್ಲಿ ಉತ್ತಮ ಮಳೆ ಸುರಿದಿದ್ದು, ಇಂದು ಸುರಿದ ಮಳೆಗೆ ಉದ್ಯಾನ ನಗರಿಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.
22 ವರ್ಷದ ಶಿಲ್ಪಾ ಸಾವನ್ನಪ್ಪಿದ ಮಹಿಳೆ. ಮಳೆಯ ಅಬ್ಬರಕ್ಕೆ ನಿರ್ಮಾಣ ಹಂತದ ಕಟ್ಟಡದ ಇಟ್ಟಿಗೆ, ಕಲ್ಲುಗಳು ಪಕ್ಕದ ಮನೆಯ ಮೇಲೆ ಬಿದ್ದಿವೆ. ಪರಿಣಾಮ ಮನೆಯಲ್ಲಿದ್ದ ಶಿಲ್ಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಧನುಷ್ ಎಂಬ ಬಾಲಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ನಾಗರಭಾವಿ, ಪೀಣ್ಯ, ಯಲಹಂಕ, ಹೆಬ್ಬಾಳ, ನಾಗವಾರ, ಕೆ.ಆರ್.ಪುರಂ, ಜಯನಗರ, ಜೆಪಿನಗರ, ಬಿಟಿಎಂ ಲೇಔಟ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಯಶವಂತಪುರದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿದೆ. ಜೊತೆಗೆ ಮರದ ಕೊಂಬೆಗಳು ಬಿದ್ದು ಎರಡು ಕಾರ್ ಗಳು ಜಖಂ ಆಗಿವೆ. ಯಲಹಂಕದಲ್ಲಿ ಎರಡು ಹಾಗೂ ಆಡುಗೋಡಿ ಹಾಗೂ ಗೊರಗೊಂಟೆಪಾಳ್ಯದಲ್ಲಿ ಒಂದು ಮರ ಬಿದ್ದಿದೆ. ಬಿಟಿಎಂ ಲೇಔಟ್ ನಲ್ಲಿ ಟ್ರಾನ್ಸಫಾರಂ ಮೇಲೆ ಮರ ಬಿದ್ದು ಇಡೀ ಬಿಟಿಎಂ ಲೇಔಟ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.