ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 46 ವರ್ಷದ ಮಹಿಳೆಗೆ ರೂ.5.6 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿಯ ಜಯನಗರದ ಮಹಿಳೆಯೊಬ್ಬರು 2019ರ ಆಗಷ್ಟ್ ನಲ್ಲಿ ಮ್ಯಾಟ್ರಿಮೋನಿ ಸೈಟಿನಲ್ಲಿ ವರನನ್ನು ಹುಡುಕಲು ತಮ್ಮ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಅದರಲ್ಲಿ ರಿಯನ್ಶ್ ದಿನೇಶ್ ಆಚಾರ್ಯ ಪರಿಚಯವಾಗಿದ್ದಾನೆ. ಜೊತೆಗೆ ಇಂಗ್ಲೆಂಡ್ ಐಎಸ್ಡಿಲ ಕೋಡ್ ಇರುವ ನಂಬರ್ ಅನ್ನು ಕೂಡ ನೀಡಿದ್ದಾನೆ.
ಪ್ರತಿ ದಿನ ಫೋನ್ ಮತ್ತು ಮೆಸೇಜ್ ಮಾಡುತ್ತಿದ್ದ ಆತ, ನಾನು ದೊಡ್ಡ ಶ್ರೀಮಂತನ ಮಗ ಎಂದು ಪರಿಚಯಮಾಡಿಕೊಂಡಿದ್ದ. ನಮ್ಮ ತಂದೆ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅವರು ಮಲೇಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷ್ಯಾಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದ.
ಇದರ ಜೊತೆಗೆ ನಮ್ಮ ತಂದೆ ಇಲ್ಲಿನ ಕೆಲ ಉದ್ಯೋಗಿಗಳಿಗೆ ಸಾಯುವ ಮುನ್ನ ದೊಡ್ಡ ಮಟ್ಟದ ಹಣ ಕೊಟ್ಟಿದ್ದಾರೆ. ಅದನ್ನು ನಾನು ಮರಳಿ ಪಡೆಯಬೇಕು ಎಂದು ಸುಳ್ಳು ಹೇಳಿದ್ದ. ಸ್ವಲ್ಪ ದಿನಗಳಲ್ಲಿಯೇ ಆ ಹಣವನ್ನು ಪಡೆಯಲು ಶುಲ್ಕ ಕಟ್ಟಬೇಕು ಅದಕ್ಕೆ 6 ಲಕ್ಷ ಹಣ ಬೇಕು ಎಂದು ಮಹಿಳೆಯ ಬಳಿ ಕೇಳಿದ್ದಾನೆ. ಅವನ ಮಾತನ್ನು ನಂಬಿದ ಮಹಿಳೆ ಆನ್ಲೈನ್ ಮೂಲಕ ಸುಮಾರು 5.6 ಲಕ್ಷವನ್ನು ಕಳುಹಿಸಿದ್ದಾರೆ.
ಇದಾದ ಬಳಿಕ ಅವರಿಗೆ ಮೇ 6ರಂದು ಮಲೇಷ್ಯಾದಿಂದ ಅರ್ಚನ ಹೆಸರಿನ ಕಸ್ಟಮ್ ಅಧಿಕಾರಿ ಕಾಲ್ ಮಾಡಿ ನೀವು ಕಳುಹಿಸಿರುವ ಹಣವನ್ನು ಮಲೇಷ್ಯಾದಲ್ಲಿ ರಿಲೀಸ್ ಮಾಡಲು ರೂ. 74 ಸಾವಿರ ಶುಲ್ಕ ಕಟ್ಟಬೇಕು ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಮಹಿಳೆ ನಡೆದ ವಿಚಾರವನ್ನು ಕುಟುಂಬಸ್ಥರ ಬಳಿ ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ತಾವು ಮೋಸ ಹೋಗಿದ್ದು ತಿಳಿದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.