ಚಾಮರಾಜನಗರ: ಲಾಕ್ ಡೌನ್ ನಿಂದಾಗಿ ಮಲೆ ಮಹದೇಶ್ವರನಿಗೆ ರೂ. 15 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.
ಚಾಮರಾಜನಗರ ಜಿಲ್ಲೆಯ ಹನೀರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿನ ದೇವಾಲಯ ಕಳೆದ ಎರಡು ತಿಂಗಳಿಂದ ಮುಚ್ಚಿದೆ. ಹೀಗಾಗಿ ಭಕ್ತರಿಲ್ಲದೆ ಮಹದೇಶ್ವರನ ಆದಾಯದಲ್ಲಿ ಹೆಚ್ಚಿನ ನಷ್ಟ ಅನುಭವಿಸಿದೆ.
ಹುಂಡಿಯೊಂದರಲ್ಲಿಯೇ ಪ್ರತಿ ತಿಂಗಳು ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗುತ್ತಿತ್ತು. ಚಿನ್ನದ ತೇರು, ವಿವಿಧ ಸೇವೆ ಲಾಡು ಮಾರಾಟ ಹಾಗೂ ವಸತಿ ಗೃಹ ಮೊದಲಾದ ಮೂಲಗಳಿಂದ ಬರುತ್ತಿದ್ದ ಆದಾಯದಲ್ಲಿ ಇದೀಗ ಕೋಟಿಗಟ್ಟಲೆ ಕಡಿತವಾಗಿದೆ.
ಆದರೆ, ದೇವಸ್ಥಾನದಲ್ಲಿ 200 ಜನ ಖಾಯಂ ನೌಕರಸ್ಥರು ಸೇರಿದಂತೆ 475ಕ್ಕೂ ಹೆಚ್ಚು ಜನರಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಸದ್ಯ ಯರಿಗೂ ಕಡಿತ ಮಾಡದೆ ಸಂಬಳ ನೀಡಲಾಗುತ್ತಿದೆ. ವೇತನ, ವಿದ್ಯುತ್ ಬಿಲ್, ಸ್ವಚ್ಚತೆ, ಸೇರಿದಂತೆ ಪ್ರತಿ ತಿಂಗಳು ರೂ. 2 ಕೋಟಿಗೂ ಅಧಿಕ ಖರ್ಚಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಮೀಸಲಿಟ್ಟಿದ್ದ ಹಣದಲ್ಲಿ ಪ್ರಾಧಿಕಾರ ಖರ್ಚು ವೆಚ್ಚ ಸರಿದೂಗಿಸುತ್ತಿದೆ.