ಗದಗ: ನಿನ್ನೆಯಷ್ಟೆ ನಿಮ್ಮ ಉತ್ತರಪ್ರಭ ಕಪ್ಪತ್ತಗುಡ್ಡದ ಬಗ್ಗೆ ಸದ್ಯದ ಬೆಳವಣಿಗೆ ಹಾಗೂ ಒಳಗೊಳಗೆ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಕುರಿತು ವಿಶೇಷ ವರದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ನಿನ್ನೆ ವಿಧಾನಸೌಧದಲ್ಲಿ ಕಪ್ಪತ್ತಗುಡ್ಡ ವನ್ಯಧಾಮಕ್ಕೆ ಸಂಬಂಧ ಪಟ್ಟಂತೆ ಸಭೆ ಕೂಡ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಸಭೆಯ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದಾಗಿ ಕಪ್ಪತ್ತಗುಡ್ಡದ ಕುರಿತು ನಡೆದಿದೆ ಎನ್ನಲಾದ ಸಭೆ ಕಗ್ಗಂಟಾಗಿಯೇ ಉಳಿದಿದ್ದು ನೂರೆಂಟು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.
ಮೇ.21 ರಂದು ವಿಧಾನಸೌಧದಲ್ಲಿ ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿ ಕುರಿತು ಸಿಎಂ ಬಿ.ಎಸ್,ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದಿತ್ತು. ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೆಕರ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಇತ್ತು. ಈ ವೇಳೆ ಪಶ್ಚಿಮಘಟ್ಟಗಳನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕುರಿತು ಚರ್ಚೆ ನಡೆದಿದೆ. ಇದೇ ವೇಳೆ ಕಪ್ಪತ್ತಗುಡ್ಡದ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಸಚಿವ ಆನಂದಸಿಂಗ್ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಭೆಯ ಮಾರನೇ ದಿನವೇ ಕಪ್ಪತ್ತಗುಡ್ಡದ ಕುರಿತಾಗಿ ಕೆಲವು ಸಚಿವರು ಹಾಗೂ ಶಾಸಕರುಗಳು ಕಪ್ಪತ್ತಗುಡ್ಡದ ವಿಚಾರವಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪತ್ತಗುಡ್ಡ ವನ್ಯಜೀವಿಧಾಮ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಸಭೆ ಎಂದು ಫೋಟೊ ಹರಿಬಿಡಲಾಗಿದೆ. ಇನ್ನು ಮುಖ್ಯವಾಗಿ ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಅತ್ತಿಕಟ್ಟಿ ಚಿನ್ನದ ಗಣಿಗಾರಿಕೆ ಕೈಗಾರಿಕೆ ಸ್ಥಾಪನೆಯ ಉದ್ದೇಶಿತ ಸ್ಥಳಕ್ಕೆ ಬಲ್ದೋಟಾ ಕಂಪನಿ ಅಧಿಕಾರಿಗಳು ಭೇಟಿ ನೀಡಿದ್ದು ಹತ್ತು ಹಲವು ಚರ್ಚೆಗೂ ಗ್ರಾಮವಾಗಿತ್ತು. ಸಿಎಂ ಸಭೆ ಹಾಗೂ ಬಲ್ದೋಟಾ ಅಧಿಕಾರಿಗಳು ಅತ್ತಿಕಟ್ಟಿ ಭೇಟಿ ಇವುಗಳ ಜೊತೆಗೆ ಸಚಿವರುಗಳ ಸಭೆ ಇವೆಲ್ಲ ಕಪ್ಪತ್ತಗುಡ್ಡದ ವಿಚಾರವನ್ನು ಕಗ್ಗಂಟಾಗಿಸಿವೆ. ಆದರೆ ಈ ಭಾಗದ ಜನರು ಮಾತ್ರ ಒಳಗೊಳಗೆ ಏನೋ ಪಿತೂರಿ ನಡೆದಿದೆ ಎಂಬ ಸಂದೇಹ ವ್ಯಕ್ತ ಪಡಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದವರು ಯಾರು..?
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಾಹಿತಿ ಪ್ರಕಾರ ನಿನ್ನೆ ಕಪ್ಪತ್ತಗುಡ್ಡದ ವಿಚಾರವಾಗಿ ಸಭೆ ನಡೆದಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅರಣ್ಯ ಸಚಿವ ಆನಂದ್ ಸಿಂಗ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಹಲವರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ.
ಕಪ್ಪತ್ತಗುಡ್ಡದ ಸುತ್ತ ಸಂದೇಹದ ಹುತ್ತ..!
ಸಭೆಯಲ್ಲಿ ಭಾಗವಹಿಸಿದ ಸಚಿವರು ಬಲ್ದೋಟಾಗೆ ಅನುಕೂಲಕರ ವಾತಾವರಣ ನಿರ್ಮಿಸಲು ಬೇಕಾದಂತಹ ಖಾತೆಗಳ ಮಂತ್ರಿಗಳೇ ಎನ್ನುವುದು ಗಮನಾರ್ಹ. ಬಲ್ದೋಟಾ ಕಂಪನಿ ಒಂದು ಬಲಾಡ್ಯ ಕಂಪನಿಯಾಗಿದ್ದು ಎಲ್ಲ ಪಕ್ಷದ ನಾಯಕರ ಜೊತೆ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಹೀಗಾಗಿ ಕೇಂದ್ರದಿಂದ ಬಲ್ದೋಟಾಗೆ ಅನುಕೂಲ ಮಾಡಿಕೊಡುವ ವಾತಾವರಣ ನಿರ್ಮಾಣವಾಗಿದೆಯೆ? ಈ ಕಾರಣದಿಂದ ಪ್ರಕಾಶ್ ಜಾವಡೆಕರ್ ಪಶ್ಚಿಮ ಘಟ್ಟಗಳ ಕುರಿತ ವಿಡಿಯೋ ಕಾನ್ಫೆರೆನ್ಸ್ ವೇಳೆ ಕಪ್ಪತ್ತಗುಡ್ಡದ ವಿಚಾರ ಪ್ರಾಸ್ತಾಪಿಸಿರಬಹುದು? ಹೀಗಾಗಿ ಸಿಎಂ ವಿಡಿಯೋ ಕಾನ್ಫ್ ರೆನ್ಸ್ ನಡೆದ ಮಾರನೇ ದಿನವೇ ಸಚಿವರುಗಳು ಸಭೆ ಸೇರಿ ಚರ್ಚಿಸಿದ ವಿಷಯವೇನು? ಹೇಗಾದರೂ ಮಾಡಿ ಕಪ್ಪತ್ತಗುಡ್ಡವನ್ನು ಬಲ್ದೋಟಾ ವಶಕ್ಕೆ ಕೊಡಲು ಏನು ಮಾಡಬೇಕು ಎನ್ನುವುದಾ? ಎನ್ನುವ ಪ್ರಶ್ನೆಯನ್ನು ಈ ಸಭೆ ಹುಟ್ಟು ಹಾಕಿದೆ.
ಒಂದೆಡೆ ಬಲ್ದೋಟಾಗೆ ಅನುಕೂಲ ಮಾಡಿಕೊಡುವ ಬಗ್ಗೆ ಸಂದೇಹಗಳು ಉದ್ಭವವಾದರೆ ಮತ್ತೊಂದೆಡೆ ಈಗಿರುವ ವನ್ಯಧಾಮ ದಿಂದ ಆಗುವ ತೊಂದರೆ ಬಗ್ಗೆಯೂ ಚರ್ಚಿಸಿರಬಹುದು ಎನ್ನಲಾಗಿದೆ. ವನ್ಯಧಾಮ ಘೋಷಣೆ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಇದರಲ್ಲಿ ಘೋಷಣಾ ಪ್ರದೇಶದ 10ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕೈಗಾರಿಕೆ ಸ್ಥಾಪನೆಗೆ ಅನುಮತಿ ಇಲ್ಲ. ಆದರೆ ಈ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಇವೆ. ಇದರಲ್ಲಿ ಕೆಲವು ಜನಪ್ರತಿನಿಧಿಗಳು ಹಾಗೂ ಅವರ ಆಪ್ತರ ಕೈಗಾರಿಕೆಗಳೇ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ ವನ್ಯಧಾಮದಿಂದ ಈಗಾಗಲೇ ಇರುವ ಸಣ್ಣಪುಟ್ಟ ಕೈಗಾರಿಕೆಗಳು ಹಾಗೂ ಕಪ್ಪತ್ತಗುಡ್ಡದ ಉದ್ದೇಶದಿಂದಲೇ ಸಾಕಷ್ಟು ಜನರು ಸುತ್ತಮುತ್ತಲಿನ ಜಮೀನು ಖರೀದಿಸಿದ್ದಾರೆ. ಅಂಥವರಿಗೆ ವನ್ಯಧಾಮ ಘೋಷಣೆ ನುಂಗದ ತುತ್ತಾಗಿದೆ. ಹೇಗಾದ್ರು ಮಾಡಿ ವನ್ಯಧಾಮ ಘೋಷಣೆಯಲ್ಲಿ ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಅನುಮಾಡಿಕೊಡಲು ಏನಾದರೂ ಮಾಡಬೇಕು ಎನ್ನುವ ಉದ್ದೇಶವೂ ಕೂಡ ಈ ಸಭೆಯ ಉದ್ದೇಶವಾಗಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಪ್ಪತ್ತಗುಡ್ಡದ ವಿಚಾರವಾಗಿ ರಾಜಕೀಯ ಹುನ್ನಾರ ನಡೆದಿರುವ ಸಂಶಯ ಕಾಡುತ್ತಿದೆ. ಈ ಹಿಂದೆಯೂ ಕೂಡ ಬಿ.ಎಸ್.ಯಡಿಯೂರಪ್ಪ ಅವರ ಪ್ರೇರಣಾ ಟ್ರಸ್ಟ್ ವಿಚಾರವಾಗಿ ಬಲ್ದೋಟಾ ಕಂಪನಿ 1 ಕೋಟಿ ರೂಪಾಯಿ ನೀಡಿರುವ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿ.ಇದನ್ನೆಲ್ಲ ನೋಡಿದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮತ್ತೆ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಘೋಷಣೆಯನ್ನು ಕೈಬಿಡಬೇಕು ಎನ್ನುವ ಪ್ರಯತ್ನಗಳನ್ನು ಬಲ್ದೋಟ ನಡೆಸಿರಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಿಡುವುದಿಲ್ಲ ಎಂದು ಕಪ್ಪತ್ತಗುಡ್ಡ ಪರ ಹೋರಾಟಗಾರ ಚಂದ್ರಕಾಂತ ಚವ್ಹಾಣ್ ಉತ್ತರಪ್ರಭಕ್ಕೆ ತಿಳಿಸಿದ್ದಾರೆ.
1 comment
ಕಪ್ಪತ್ತ ಗುಡ್ಡವನ್ನು ಕಾಯ್ದಿಟ್ಟ ಅರಣ್ಯ ಪ್ರದೇಶ, ಹಾಗೂ ವನ್ಯಜೀವಿ ಧಾಮ ಎಂದೂ ಸಂಪೂರ್ಣವಾಗಿ ಸರಕಾರ ಘೋಷಣೆ ಮಾಡಿ ಕಪ್ಪತ್ತಗಿರಿಯ ಸುಂದರ ವನಸಿರಿಯನ್ನು ರಕ್ಷಿಸ ಬೇಕೆಂದು ವಿನಂತಿ