ಬೆಂಗಳೂರು: ರಾಜ್ಯದಲ್ಲಿ ಕೇವಲ 13 ಜನರಿಂದ 498 ಜನರಿಗೆ ಕೊರೊನಾ ವೈರಸ್ ಹರಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇಂದು ಒಂದೇ ದಿನ ಬರೋಬ್ಬರಿ 45 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯಂತೆ ಮೇ. 7ರ ವರೆಗೆ ನಂಜನಗೂಡು ಔಷಧಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಕಿತ ವ್ಯಕ್ತಿಯೊಬ್ಬನಿಂದಲೇ ಸುಮಾರು 76 ಜನರಿಗೆ ವೈರಸ್ ಹರಡಿದೆ ಎಂದು ತಿಳಿದು ಬಂದಿದೆ.
ವಿಜಯಪುರದ 60 ವರ್ಷದ ಮಹಿಳೆಯಿಂದ 37 ಜನರಿಗೆ ಸೋಂಕು ಹರಡಿದೆ. ಬೆಳಗಾವಿ ಮೂಲದ 20 ವರ್ಷದ ಯುವಕನಿಂದ 36 ಜನರಿಗೆ ಸೋಂಕು ಹರಡಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ನೇರ ಹಾಗೂ ಪರೋಕ್ಷವಾಗಿ 48 ಮಂದಿಗಾದರೂ ಸೋಂಕು ತಗುಲಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊರೊನಾ ವಾರ್ ರೂಂ ಮತ್ತು ಸೋಂಕು ಪತ್ತೆ ತಂಡದ ಉಸ್ತವಾರಿ ವಹಿಸಿರುವ ಐಎಎಸ್ ಅಧಿಕಾರಿ ಮುನೀಶ್ ಮುದ್ಗಿಲ್ ಅವರು, ತಾವು ಇತರರಿಗೂ ವೈರಸ್ ಹರಡುತ್ತಿದ್ದೇವೆಂಬ ವಿಚಾರ ಸೋಂಕಿತ ವ್ಯಕ್ತಿಗಳಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಆತನಲ್ಲಿ ವೈರಸ್ ಕುರಿತ ಯಾವುದೇ ಲಕ್ಷಣಗಳೂ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಆತನಿಗೆ ತಿಳಿಯದಂತೆಯೇ 20 ಜನರಿಗೆ ಸೋಂಕು ಹರಡಿದೆ. ಇನ್ನುಳಿದಂತೆ ಹಲವರು ವ್ಯಕ್ತಿಗಳಿಂದ ವ್ಯಾಪಕವಾಗಿ ವೈರಸ್ ಹರಡಿದೆ. ಕೇವಲ 13 ಜನರಿಂದ 498 ಜನರಲ್ಲಿ ವೈರಸ್ ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.