ಗದಗ: ಲಾಕ್ ಡೌನ್ ಹಿನ್ನೆಲೆ ಕಳೆದ 45 ದಿನಗಳಿಂದ ಸಾರಾಯಿ ಅಂಗಡಿ ಬಂದ ಇರುವುದರಿಂದ ಜನರಲ್ಲಿ ಶಿಸ್ತು ಇತ್ತು. ಆದರೆ ಕಳೆದ ಎರಡು ದಿನಗಳಿಂದ ಮತ್ತೆ ಸಾರಾಯಿ ಅಂಗಡಿ ಆರಂಭವಾಗಿದ್ದರಿಂದ ಜನರಲ್ಲಿ ಶಿಸ್ತು ಮಾಯವಾಗಿದೆ ಎಂದು ಗದಗ ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ತಾಲೂಕಿನ ಎಲ್ಲ ಮನೆಗಳಿಗೆ ರೇಷನ್ ಹಾಗೂ ತರಕಾರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಾಂತ ಪರಿಸ್ಥಿತಿ ಮುಂದುವರೆಯಬೇಕಾದರೆ ಮದ್ಯಪಾನ ನಿಷೇಧವಾಗಬೇಕು. ಇದು ನಾವು ನಿವೆಲ್ಲ ಒತ್ತಾಯಿಸೋದಲ್ಲ. ಸಂವಿಧಾನದ 47 ನೇ ಆರ್ಟಿಕಲ್ ಈ ಬಗ್ಗೆ ಹೇಳುತ್ತದೆ. ಸಂವಿಧಾನಕ್ಕಾದರೂ ಅಥವಾ ಮಹಾತ್ಮಾಗಾಂಧಿಜೀ ಅವರಿಗಾದರೂ ಗೌರವ ಕೊಟ್ಟು ಮದ್ಯ ನಿಷೇಧಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೇಷನ್ ಪಡೆಯಲು ಕ್ಯೂ ನಿಲ್ಲಬೇಕಾದ ಜನರು ಇದೀಗ ಸಾರಾಯಿ ಅಂಗಡಿ ಎದುರು ಕ್ಯೂ ನಿಲ್ಲುವಂತಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮದ್ಯ ನಿಷೇಧ ಮಾಡಿ ಜನರ ನೆಮ್ಮದಿಗೆ ಕಾರಣವಾಗಬೇಕು ಎಂದರು.