ಉತ್ತರಪ್ರಭ ಸುದ್ದಿ
ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹರಿದು ಬರುವ ನೀರಿನ ಪ್ರಮಾಣ ಅಧಿಕಗೊಳ್ಳುತ್ತಿರುವುದಕ್ಕೆ ಮುಂಜಾಗ್ರತಾ ಕ್ರಮವಾಗಿ ಹೊರಹರಿವು ಹೆಚ್ಚಿಸಲಾಗಿದೆ. ಈ ಮುಂಚೆ ಒಂದು ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಇಂದು 1.25 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಸೋಮವಾರ ಸಂಜೆ ವೇಳೆಗೆ ನದಿಪಾತ್ರಕ್ಕೆ 1 ಲಕ್ಷ ಕ್ಯುಸೆಕ್ ಬಿಡಲಾಗುತ್ತಿದ್ದ ನೀರುಮಂಗಳವಾರ ಬೆಳಿಗ್ಗೆಯಿಂದ ನೀರು ಬಿಡುಗಡೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ನೇರೆಯ ಮಹಾರಾಷ್ಟ್ರದ ಪಶ್ಚಿಮಘಟ್ಟ ಮತ್ತು ರಾಜ್ಯದ ಕೃಷ್ಣಾ ಅಚ್ಚುಕಟ್ಟು ಭಾಗದಲ್ಲಿ ನಿರಂತರ ಮೇಘ ವೃಷ್ಟಿ ಆಗುತ್ತಿದೆ. ಇದರಿಂದ ಕೃಷ್ಣಾ ನದಿಯಲ್ಲಿ ಒಳಹರಿವಿನ ರಭಸ ಜೋರಾಗಿದೆ. ಜಲಾಶಯದ ಮುಂಭಾಗದ ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಡಂಗುರ ಸಾರಲಾಗಿದೆ. ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಎಚ್ಚರಿಸಲಾಗಿದೆ. ಮಂಗಳವಾರವೂ ಡಂಗೂರ ಸಾರಿ ಮುನ್ನೆಚ್ಚರಿಕೆ ವಹಿಸುವಂತೆ ಜನತೆಯಲ್ಲಿ ಕೋರಲಾಗಿದೆ.