ಉತ್ತರಪ್ರಭ ಸುದ್ದಿ
ನಿಡಗುಂದಿ: ಆಧುನಿಕ ಯುಗದಲ್ಲಿ ರಂಗಭೂಮಿ ಕಲಾವಿದರು ಮೂಲೆ ಗುಂಪಾದರು ಎಂಬ ಮಾತೆಲ್ಲ ಶುದ್ಧ ಸುಳ್ಳು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಕೂಡ ರಂಗಭೂಮಿ ತನ್ನ ಗತ ಪರಂಪರೆಯೊಂದಿಗೆ ವಾಸ್ತವಿಕ ಜಗತ್ತಿನ ಆವಿಷ್ಕಾರಗಳನ್ನೆಲ್ಲ ಮೈ ಗೂಡಿಸಿಕೊಂಡು ಮರುಜನ್ಮ ಪಡೆದಿದೆ ಎಂದು ಹಿರಿಯ ಅಪ್ಪಟ ಸ್ತ್ರೀ ರಂಗ ಕಲಾವಿದ ವಿಜಯಕುಮಾರ್ ಮಾನ್ವಿ ಹೇಳಿದರು. ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಹಾಗೂ ಮತ್ತರ್ವ ಹಿರಿಯ ರಂಗ ಕಲಾವಿದೆ ಕೆ.ಅಂಜನಾ ಅವರನ್ನು ಸ್ಥಳೀಯ ರಂಗಭೂಮಿ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ದೂರದರ್ಶನ ಮೊಬೈಲ್ ನಡುವೆಯೂ ರಂಗಭೂಮಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವಲ್ಲಿ ಇಲ್ಲಿನ ನೈಜ ಕಲೆಯೇ ಮೂಲ ಕಾರಣವಾಗಿದೆ. ಕಲಾ ಪ್ರೇಮಿಗಳೆಲ್ಲರೂ ರಂಗಭೂಮಿಯನ್ನು, ಕಲಾವಿದರನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುವ ಅನಿವರ್ಯತೆಯೂ ಇದೆ ಎಂದರು. ಸಂಗೀತ ಕಲಾವಿದ ಪ್ರಭು ಗುಡ್ಡದ ಮಾತನಾಡಿ, ಆಧುನಿಕ ವೈಭವದ ನಡುವೆಯೂ ಕಳೆದ ಎರಡು ದಶಕಗಳಿಂದ ಪುರುಷರಾಗಿದ್ದರೂ ಅಪ್ಪಟ ಸ್ತ್ರೀ ಕಲಾವಿದೆಯ ಪಾತ್ರ ನಿರ್ವಹಣೆ ಮಾಡಿ, ಜನರನ್ನು ರಂಜಿಸುತ್ತಾ ಬಂದಿರುವ ವಿಜಯಕುಮಾರ್ ಮಾನ್ವಿ ಅವರು ಒಂದು ಪವಾಡವೇ ಸರಿ ಎಂದರು.
ದೇವಾಂಗಮುನಿ ದೇವಾಂಗಮಠ, ಅಮೃತ ಯಾದವ, ವಿನೋದ ಭಜಂತ್ರಿ, ಜಗದೀಶ ಕಮತಗಿ, ರೇಖಾ ಕುಪ್ಪಸ್ತ, ಚಂದ್ರಶೇಖರ ಜಾಧವ, ರಾಜಕುಮಾರ ಬಡಿಗೇರ ಇದ್ದರು.