ಉತ್ತರಪ್ರಭ
ಆಲಮಟ್ಟಿ: ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಗುರುವಾರ ಸಂಜೆ ಒಳಹರಿವು ಹೆಚ್ಚಾಗಿದ್ದು, 1,21,472 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬುಧವಾರ ಮಧ್ಯಾಹ್ನದಿಂದ ಬಿಡಲಾಗುತ್ತಿದ್ದ 1.25 ಲಕ್ಷ ಕ್ಯುಸೆಕ್ ನೀರು ಹೊರಹರಿವು ಯಥಾಸ್ಥಿತಿ ಗುರುವಾರವೂ ಮುಂದುವರೆದಿದೆ.
ಜಲಶಯಕ್ಕೆ ಬೆಳಿಗ್ಗೆ 1,12,244 ಕ್ಯುಸೆಕ್ ಒಳಹರಿವು ಇತ್ತು. ಸಂಜೆ ಅಲ್ಪ ಹೆಚ್ಚಾಗಿದೆ. ಜಲಾಶಯಕ್ಕೆ ಗುರುವಾರ, 9.69 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ. ಸದ್ಯ 519.6 ಮೀ ಎತ್ತರದ ಜಲಾಶಯದಲ್ಲಿ 517.27 ಮೀ.ವರೆಗೆ ನೀರು ಸಂಗ್ರಹವಾಗಿದ್ದು, ಜಲಾಶಯದಲ್ಲಿ 87.865 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿದೆ. ಗುರುವಾರ, ಕೊಯ್ನಾ 11.2 ಸೆಂ.ಮೀ, ಮಹಾಬಳೇಶ್ವರ 27 ಸೆಂ.ಮೀ, ನವಜಾ 12.1 ಸೆಂ.ಮೀ, ರಾಧಾನಗರಿ 14.3 ಸೆಂ.ಮೀ, ಉರ್ಮೋದಿ 7.8 ಸೆಂ.ಮೀ, ದೂಧಗಂಗಾ 5.6 ಸೆಂ.ಮೀ ಮಳೆಯಾಗಿದೆ.
ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 93375 ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 26,400 ಕ್ಯುಸೆಕ್ ಸೇರಿ 1,19,775 ಕ್ಯುಸೆಕ್ ನೀರು, ಕಲ್ಲೋಲ ಬ್ಯಾರೇಜ್ ಬಳಿ ಕರ್ನಾಟಕದ ಕೃಷ್ಣಾ ನದಿಯನ್ನು ಸೇರುತ್ತಿದೆ. ಹೀಗಾಗಿ ಮುಂದಿನ ಎರಡು ದಿನಗಳಲ್ಲಿ ಆಲಮಟ್ಟಿ ಜಲಾಶಯದ ಒಳಹರಿವು 1.5 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಯಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.