ಉತ್ತರಪ್ರಭ
ನಿಂಗಪ್ಪ ಬಿ.ಮಡಿವಾಳರ
ಗಾಳಿಯಂತ್ರ ಸಾಗಿಸಲು ಗಾಳಿ ಕೊಡುವ ಮರದ ಟೊಂಗೆಗಳು ಬಲಿ
ಐತಿಹಾಸಿಕ ಗಿಡಗಳನ್ನು ಕಡಿಯಲು ಪರವಾನಿಗೆ ನೀಡಿತಾ ಅರಣ್ಯ ಇಲಾಖೆ?
ನರೇಗಲ್: ನಗರೀಕರಣ, ಔದ್ಯಮೀಕರಣ, ಜನಸಂಖ್ಯೆ ಹೆಚ್ಚಳದಿಂದಾಗಿ ಅರಣ್ಯ ಕ್ಷೀಣಿಸುತ್ತ ಸಾಗಿದೆ. ಪರಿಸರ ಕಾಳಜಿ ಎಂಬುದು ವಿಶ್ವ ಪರಿಸರ ದಿನಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಗಿಡ ಮರಗಳಿಂದ ನಮಗೆ ಎನೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಿದ್ದರೂ ಅನಗತ್ಯವಾಗಿ ಗಿಡ ಮರಗಳನ್ನು ನೆಲಕ್ಕುರುಳಿಸುವ ಕಾರ್ಯ ಎಗ್ಗಿಲ್ಲದೆ ನಡೆದಿದೆ. ಒಂದೆಡೆ ಪರಿಸರ ಕಾಳಜಿ ತೋರಿಸಲು ಹಾಗೂ ಪ್ರಚಾರಕ್ಕಾಗಿ ಸಸಿಗಳನ್ನು ನೆಡಲಾಗುತ್ತದೆ. ಆದರೆ ಇನ್ನೊಂದೆಡೆ ಗಿಡಗಳ ಮಾರಣಹೋಮ ನಿರಂತರ ನಡೆಯುತ್ತಿದೆ.



ಪಟ್ಟಣದ ಅಬ್ಬಿಗೇರಿ ರಸ್ತೆಯ ಎರಡು ಬದಿಗೆ ಇರುವ ಹುಣಸೆ ಮರಗಳಿಗೆ ಪರಿಸರ ದಿನದಂದೇ ಕೊಡಲಿ ಪೆಟ್ಟು ಹಾಕಿದ್ದಾರೆ ಪರಿಸರ ಪ್ರೇಮಿಗಳು, ಶಿಕ್ಷಕರು ಹಾಗೂ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೋ ತಲೆ ಮಾರುಗಳ ಮರಗಳ ದೊಡ್ಡ ಪ್ರಮಾಣದ ಟೊಂಗೆಗಳನ್ನು ಕತ್ತರಿಸಿರುವ ಗಾಳಿ ವಿದ್ಯುತ್ (ವಿಂಡ್) ಕಂಪನಿಯ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಉತ್ತರಪ್ರಭ ಪತ್ರಿಕೆಯೂಂದಿಗೆ ಮಾತನಾಡಿದ ವೃಕ್ಷ ಪ್ರೇಮಿ ಅಶೋಕ ಬೇವಿನಕಟ್ಟಿ. ಗಿಡಗಳನ್ನು ನೆಲಕ್ಕುರುಳಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿರುವುದು ಕೂಡ ಮರಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಪಟ್ಟಣದಲ್ಲಿ ಅಂದಾಜು ಎರಡು ತಲೆ ಮಾರಿನಿಂದ ಬೆಳೆದು ಬಂದ ಮರಗಳ ಬಲಿಷ್ಠವಾದ ಟೊಂಗೆಗಳನ್ನು ಕತ್ತರಿಸಿರುವುದು ಬಹಳ ನೋವು ಉಂಟು ಮಾಡಿದೆ. ಅಂದಾಜು 23 ಗಿಡಗಳನ್ನು ಅಲ್ಲಲ್ಲಿ ಕತ್ತರಿಸಿದ್ದಾರೆ. ಆದರೆ ಯಾವ ಗಿಡವು ಮರಳಿ ಬೆಳೆಯುವ ಶಕ್ತಿಯನ್ನು ಹೊಂದಿಲ್ಲ. ಆದ್ದರಿಂದ ಖಾಸಗಿ ಕಂಪನಿಯ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪರ್ಯಾಯದತ್ತ ಇರಲಿ ಗಮನ ಔದ್ಯಮಿಕರಣ ಹಾಗೂ ಅಭಿವೃದ್ಧಿಯ ನೆಪದಲ್ಲಿ ಮರಗಳ ಮಾರಣಹೋಮ ನಿಲ್ಲಲಿ. ಒಂದು ಮರ ಕಡಿದರೆ ಇನ್ನೊಂದು ಮರ ಬೆಳಸಲು ದಶಕಗಳೇ ಬೇಕು ಆದರಿಂದ ಮರಗಳ ಕಡಿಯುವ ಬದಲು ಹೆಚ್ಚಾಗಿ ಸಸಿಗಳನ್ನು ನೆಟ್ಟ ಬೆಳಸಲು ಪರಿಸರ ಪ್ರೇಮಿಗಳು ಮುಂದಾಗಬೇಕು. ಗ್ರೀನ್ ಆರ್ಮಿ ತಂಡದ ಸದಸ್ಯರು ವಿಂಡ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ರಸ್ತೆಯನ್ನು ದ್ವಿಪಥಗೊಳಿಸಿ ಮರಗಳನ್ನು ಕಡೆಯುತ್ತೇವೆ ಎಂದಾಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವ ಎಚ್ಚರಿಕೆ ನೀಡಿ ಮರಗಳನ್ನು ರಕ್ಷಣೆ ಮಾಡಲಾಗಿದೆ. ಆದರೆ ಈಗ ಏಕೆ ಕೊಡಲಿ ಪೆಟ್ಟು ನೀಡಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನವಾಗಿದೆ. ಗಾಳಿ ವಿದ್ಯುತ್ ಕಂಪನೀಯವರು ಹೊಲಗಳಲ್ಲೂ ಮರಗಿಡಗಳನ್ನು ಕತ್ತರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಹುಣಸೆ ಮರಗಳ ಟೊಂಗಿಗಳನ್ನು ಕತ್ತರಿಸಿದ್ದಾರೆ. ಕೇಳಲು ಹೋದರೆ ಇಲಾಖೆಯಿಂದ ಅನುಮತಿ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಯಾವುದೇ ಕಾಮಗಾರಿ ನೆಪದಲ್ಲಿ ಮರಗಿಡಗಳಿಗೆ ಕೊಡಲಿ ಪೆಟ್ಟು ಹಾಕದರೆ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಗ್ರೀನ್ ಆರ್ಮಿ ತಂಡದ ಸದಸ್ಯರಾದ ನಿಂಗಪ್ಪ ಮಡಿವಾಳರ, ಚಂದ್ರು ರಾಥೋಡ್, ಸಂಗಮೇಶ ಬಾಗೂರ, ಕಿರಣಕುಮಾರ ತಳಕವಾಡ ಎಚ್ಚರಿಕೆ ನೀಡಿದರು.
ವಿಂಡ್ ಕಂಪನಿಯವರಿಗೆ ಬೃಹತ್ ಗಾಳಿ ವಿದ್ಯುತ್ ಕಂಬಗಳನ್ನು ಸಾಗಿಸಲು ಅಡ್ಡಬರುವ ಗಿಡದ ಟೊಂಗೆಗಳನ್ನು ಕಡಿಯಲು ಪರವಾನಿಗೆ ನೀಡಲಾಗಿದೆ.
–ದೀಪಿಕಾ ಬಾಜಪೈ ಗದಗ ಜಿಲ್ಲಾ ಅರಣ್ಯ ಅಧಿಕಾರಿ
ಸುಮಾರು ಎರಡು ಮೂರು ತಲೆಮಾರಿನ ಬೃಹತ್ ಹುಣಸೆ ಮರಗಳನ್ನು ವಿಂಡ್ ಕಂಪನಿಯವರು ಕಡಿದಿದ್ದು ಇದಕ್ಕೆ ಅರಣ್ಯ ಇಲಾಖೆಯವರು ಪರವಾನಿಗೆ ನೀಡಿದ್ದು ಎಷ್ಟು ಸರಿ ಇದರ ವಿರುದ್ಧ ತಾಲ್ಲೂಕು ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು.
–ಶಿವು ಕೊಪ್ಪದ
ಗ್ರೀನ್ ಆರ್ಮಿ ತಂಡದ ಸದಸ್ಯ
