ಉತ್ತರಪ್ರಭ
ಆಲಮಟ್ಟಿ: ಕರುನಾಡಿನಲ್ಲಿ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ತಾವು ದೃಢ ಸಂಕಲ್ಪ ಹೊಂದಿದ್ದು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದು ನೋಡಿ, ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಚಿತ್ರಣ ಸಂಪೂರ್ಣ ಬದಲಿಸಿ ತೋರಿಸುವೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತ್ಮವಿಶ್ವಾಸ ಭರಿತ ನುಡಿಗಳ ಭರವಸೆ ನೀಡಿದರು.
ಆಲಮಟ್ಟಿ ಡ್ಯಾಂ ಸೈಟ್‌ನ ಎಂ.ಪಿ.ಎಸ್ ಶಾಲಾವರಣದಲ್ಲಿ ಶನಿವಾರ ವಿಜಯಪುರ, ಬಾಗಲಕೋಟ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಗಂಗಾರಥ ಯಾತ್ರೆ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಒಮ್ಮೆ ಜೆಡಿಎಸ್ ಪಕ್ಷದ ಮೇಲೆ ಭರವಸೆಯಿರಿಸಿ ಆಡಳಿತಕ್ಕೆ ಅನುಕೂಲ ಮಾಡಿಕೊಟ್ಟರೆ ಖಂಡಿತ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷದೊಳಗಾಗಿ ಪೂರ್ಣಗೊಳಿಸಿ ಅನ್ನದಾತರಿಗೆ,ಜನತೆಗೆಲ್ಲರಿಗೂ ನೆಮ್ಮದಿಯ ವಾತಾವರಣ ಕಲ್ಪಿಸಿಕೊಡುವೆ ಎಂದರು. ಮಾತಲ್ಲೆ ಮರಳು ಮಾಡುವ ಪ್ರಧಾನಿ ಮೋದಿ ರಾಜ್ಯಕ್ಕೆ ನೀಡಿರುವ ಕೊಡುಗೆ ಶೂನ್ಯ. ನಿತ್ಯ ದಿನ ಬಳಕೆಗೆ ಅವಶ್ಯಕತೆಯಿರುವ ವಸ್ತುಗಳ ಬೆಲೆ ಗಗನಕ್ಕೆರಿಸಿ ಬಡಬಗ್ಗರ,ಮಧ್ಯಮ ವರ್ಗದವರ,ಜನಸಾಮಾನ್ಯರ, ರೈತಾಪಿ ಜನತೆಯ ಬದುಕು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ನಾನಾ ನದಿಗಳ ನೀರಿನ ಸದ್ಬಳಿಕೆ ಸರಿಯಾಗಿವಾಗುತ್ತಿಲ್ಲ. ಕುಡಿಯಲು ಶುದ್ಧ ನೀರು,ಕೃಷಿಕರಿಗೂ ಸಮೃದ್ಧ ಜಲ ಧ್ಯೇಯವಾಕ್ಯದ ಸಂಕಲ್ಪದೊಂದಿಗೆ ಜನತಾ ಜಲಧಾರೆ ಗಂಗಾರಥಯಾತ್ರೆ ಇಂದು ರಾಜ್ಯಾದ್ಯಂತ ಹದಿನೈದು ಕಡೆಗಳಲ್ಲಿ ಏಕಕಾಲದಲ್ಲಿ ಮೊಳಗಿದೆ. ಕಾಂಗ್ರೆಸ್, ಬಿಜೆಪಿ ಸರಕಾರಗಳು ನೀರಾವರಿ ವಿಷಯ ಕಡೆಗಣಿಸಿವೆ. ಅವರು ತೋರಿದ ನಿರ್ಲಕ್ಷ್ಯ, ವೈಫಲ್ಯದಿಂದಾಗಿ ಇಂದು ಜಲ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಅಧಿಕಾರ ಸವಿದು ದ್ರೋಹ ಬಗೆದಿವೆ. ನೀರಾವರಿ ಯೋಜನೆಗಳ ನಿರ್ವಹಣೆ ವಿಫಲವಾಗಿವೆ. ಕೃಷ್ಣೆಯ ಕೂಗಿಗಂತೂ ಉದಾಸೀನ ಪ್ರದಶಿ೯ಸಿದ್ದಾರೆ ಎಂದು ಆರೋಪಿಸಿದರು.
ತಮ್ಮ ರಾಜಕೀಯ ಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಜನತಾ ಜಲಧಾರೆಯಾಗಿದೆ.ನೀರಾವರಿ ವಿಷಯದಲ್ಲಿ ಸುಮಾರು ಏಳುವರೆ ದಶಕದಿಂದ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವ ದಿಸೆಯಲ್ಲಿ ರಾಜ್ಯದ 15 ಕಡೆಗಳಲ್ಲಿ ನದಿಯಿಂದ ನೀರು ಸಂಗ್ರಹಿಸಿ ನೀರಾವರಿ ಕುರಿತು ಜೆಡಿಎಸ್ ಪಕ್ಷದಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ತಮ್ಮ ಪಕ್ಷ ಮೊದಲಿನಿಂದಲೂ ಕೃಷ್ಣಾ ಯೋಜನೆಗೆ ಪ್ರಾಶಸ್ತ್ಯ ನೀಡಿದೆ.ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದು ನಮ್ಮ ಅಂದಿನ ಜೆಡಿಎಸ್ ಸರಕಾರದ ಅವಧಿಯಲ್ಲಿ. ಕೆರೆ ತುಂಬುವ ಯೋಜನೆಯ ಮೊದಲ ಹಂತಕ್ಕೂ ತಮ್ಮ ಪಕ್ಷವೇ ಅನುಮತಿ ನೀಡಿದೆ. ಈ ಹಿಂದೆ ಬೇರೆ ಪಕ್ಷಗಳ ನೆರಳಿನಲ್ಲಿ ಜೆಡಿಎಸ್ ಅಧಿಕಾರ ನಡೆಸಿದೆ.ಒಂದು ಬಾರಿ ಸ್ವತಂತ್ರವಾಗಿ ಆಡಳಿತ ನಡೆಸಲು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ಕಳಿಸಿ. ಮತದಾರ ಪ್ರಭುಗಳು ಆಶೀರ್ವದಿಸಿದರೆ ರಾಜ್ಯದ ಅಭಿವೃದ್ಧಿ ನೋಟವೇ ಮಾದರಿಯಾಗಲಿದೆ ಎಂದರು.
ಕೃಷ್ಣೆ ಬಚಾವತ ನೀರಿನ ಹಂಚಿಕೆಯಲ್ಲಿ ದೇವೆಗೌಡರು ಮುಖ್ಯ ಕಾರ್ಯನಿರ್ವಹಿಸಿದ್ದಾರೆ. ಅಂದು ಗೌಡರು ಮನಸ್ಸು ತೋರದಿದ್ದರೆ ಅದು ಅಂದ್ರದ ಪಾಲಾಗುತಿತ್ತು. ರಾತ್ರೋರಾತ್ರಿ ತುಂಡು ಗುತ್ತಿಗೆ ನೀಡಿ ಕಾಲುವೆ ನಿಮಿ೯ಸಿ ನೀರು ಬಳಕೆ ಮಾಡಿಕೊಂಡರು. ಜಾಮದಾರ ಎಂಬ ದಕ್ಷ ಅಧಿಕಾರಿಗೆ ವಿಶೇಷ ಅಧಿಕಾರ ನೀಡಿ ಜನರಿಗೆ ಪರಿಹಾರ ಒದಗಿಸಿಕೊಟ್ಟಿದ್ದರಿಂದ ಜನರು ಭೂಮಿ ತ್ಯಾಗ ಮಾಡಿದ್ದಾರೆ. ಇದನ್ನು ಮಾಡಿದ್ದು ಸಹ ದೇವೇಗೌಡರೆ.ಅಧಿಕಾರದ ಲಾಲಸೆಗೆ ಒಳಗಾಗದೇ ರಾಜ್ಯದ ನೀರಾವರಿ ಯೋಜನೆ ಹಿತಕ್ಕಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು. 8 ಸಾವಿರ ಕೋಟಿ ವರ್ಷಕ್ಕೆ ಬಜೆಟ್‌ನಲ್ಲಿ ತಗೆದಿರಿಸಿದರೆ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದರು. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ನೀಡಿಕೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಸರಕಾರಗಳು ಬದಲಾದಂತೆ ಯೋಜನೆಯ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ .ಸರಕಾರ ಇಚ್ಛಾಶಕ್ತಿಯಿಂದ ನೀರಾವರಿ ಯೋಜನೆಗಳ ಬಗ್ಗೆ ಒಲವು ತೋರಿ ಶೀಘ್ರವಾಗಿ ಪೂರ್ಣಗೊಳಿಸಬೇಕು. ಕೃಷ್ಣಾ ಯೋಜನೆಯ ಕೆಲಸಗಳು ಸಮರೋಪಾದಿಯಲ್ಲಿ ಸಾಗಬೇಕು. ಪ್ರತಿ ಹನಿ ನೀರು ವ್ಯರ್ಥ ವ್ಯಯವಾಗದೇ ಉಪಯೋಗಕ್ಕೆ ಬರಬೇಕು ಎಂದರು.
ಉಳಿದ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದ ಕಾರಣ ಇನ್ನೂ ಇಲ್ಲಿ ಬರಡು ನೆಲೆಯಿದೆ. ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಬುಡಕಟ್ಟು ಜನತೆ ಗುಳೆ ಸಂಸ್ಕೃತಿ ಮುಂದುವರೆಸಿಕೊಂಡು ಹೋರಟಿದ್ದಾರೆ. ಈ ರೀತಿಯ ಸಮಸ್ಯೆ ಕೃಷ್ಣೆಗೆ ಅಷ್ಟೇ ಎದುರಾಗಿಲ್ಲ. ಬಹುತೇಕ ಎಲ್ಲಡೆ ಇದೆ ಎಂದು ಹೇಳಿದರು.
ತುಂಗಭದ್ರಾ, ಮಹಾದಾಯಿ ಹೂಳಿನಿಂದ ತುಂಬಿವೆ. ಅಲ್ಲಿ ನೀರು ಸಿಗುತ್ತಿಲ್ಲ. ನೀರಿನ ಸದುಪಯೋಗಕ್ಕೆ ಸರಕಾರ ಮುಂದಾಗುತ್ತಿಲ್ಲ. ಅನೇಕ ರೈತರು ಸಂಕಷ್ಟಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ದೂರಿದರು ಸಿಎಂ ಕುಮಾರಸ್ವಾಮಿ. ತಾವು ಅಧಿಕಾರಕ್ಕಾಗಿ ಅಂದು ಸಮ್ಮಿಶ್ರ ಸರಕಾರದೊಂದಿಗೆ ಕೈ ಜೋಡಿಸಿಸಲಿಲ್ಲ. ರೈತರ ಸಾಲ ಮನ್ನಾಕ್ಕಾಗಿ ಕೈಜೋಡಿಸಿದ್ದೆ. ಅನ್ನದಾತರ ಜೀವನ ಮಟ್ಚ ಸುಧಾರಣೆಗಾಗಿ ಸಾಲಮನ್ನಾ ಮಾಡಿದ್ದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ತಂದರೆ ಸಮಗ್ರ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. 6000 ಗ್ರಾಪಂಗೆ ಒಂದರಂತೆ ಪ್ರತಿ ಪಂಚಾಯತಿಗೆ 39 ಹಾಸಿಗೆ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆ ನಿಮಿ೯ಸುವೆ. ಗಂಭೀರ ಕಾಯಿಲೆ ಹಣ ಭರಿಸಲಾಗದ ಬಡವರಿಗಾಗಿ ಸ್ಪಂದಿಸಿ ಉಚಿತ ಚಿಕಿತ್ಸೆಗೆ ನೆರವಾಗುವೆ. ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಬೆಳಗಳಿಗೆ ಗ್ರಾ ಪಂ.ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಸೂಕ್ತ ಬೆಂಬಲ ಬೆಲೆ ನಿರ್ಧರಿಸಿ ಖರೀದಿಸಲು ಅನುವು ಮಾಡಿಕೊಡಲಾಗುವುದು. ಉದ್ಯೋಗ ಆರಿಸಿ ಗುಳೆ ಹೋಗುವುದನ್ನು ನಿಯಂತ್ರಿಸುವೆ. ಗುಣ ಮಟ್ಟದ ಆಹಾರ ಮಕ್ಕಳಿಗೆ ನೀಡುವೆ. ಮಕ್ಕಳ ಶಿಕ್ಷಣಕ್ಕೆ ಪ್ರತಿ ಗ್ರಾಮ ಕೇಂದ್ರದಲ್ಲಿ ಎಲ್ಕೆಜಿ ಯಿಂದ 12 ನೇ ತರಗತಿವರೆಗೆ ಉಚಿತ ಕನ್ನಡ, ಆಂಗ್ಲ ಮಾದ್ಯಮಿಕ ಶಾಲೆಗಳನ್ನು ಆರಂಭ, ಪ್ರತಿ ಕುಟುಂಬಕ್ಕೊಂದು ಮನೆ,ಉದ್ಯೋಗ, ತೆಲಂಗಾಣ ಸರಕಾರದ ಮಾದರಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವದಾಗಿ ಆಶ್ವಾಸನೆ ನೀಡಿದರು. ಒಂದು ವೇಳೆ ಇವೆಲ್ಲ ಭರವಸೆಗಳು ಸಾಕಾರಗೊಳ್ಳದಿದ್ದರೆ.ತಾವು ನುಡಿದಂತೆ ನಜೆಯಲ್ಲಿ ತಪ್ಪಿದರೆ ಇಡೀ ಜೆಡಿಎಸ್ ಪಕ್ಷವನ್ನೇ ಸಂಪೂರ್ಣ ವಿಸಜಿ೯ಸುವೆ ಎಂದು ಕುಮಾರಸ್ವಾಮಿ ನುಡಿದರು.


ಜಲ ಸಂಗ್ರಹ: ಜಾಗೃತ ದೇವಿ ಚಂದ್ರಮ್ಮದೇವಿ ಸಮೀಪದ ಕೃಷ್ಣೆಯ ಪವಿತ್ರ ಜಲವನ್ನು ಪೂಜಿಸಿ ಜಯಘೋಷದ ವಾದ್ಯ ಮೇಳದೊಂದಿಗೆ ಕಲಶದಲ್ಲಿ ಸಂಗ್ರಹಿಸಲಾಯಿತು. ಬಳಿಕ ಸಹಸ್ರಾರು ಮಹಿಳೆಯರು ಕಲಶ ಹೊತ್ತು ಸಾಗಿದರು. ಭವ್ಯ 2060 ಕಲಶ ನಾರಿಮಣಿಗಳು ತಲೆಮೇಲೆ ಹೊತ್ತ ಕುಂಭ ಮೇಳ ಮೆರವಣಿಗೆ ಹಬ್ಬದ ವಾತಾವರಣ ಸೃಷ್ಟಿಸಿತು. ಚಂದ್ರಮ್ಮ ದೇಗುಲದಿಂದ ಸಮಾವೇಶದ ವೇದಿಕೆವರೆಗೆ ಜನಜಾತ್ರೆ ನೆರದಿತ್ತು. ಕಾಲ್ಕಿತ್ತಿಡಲು ಜನ ಪ್ರಯಾಸ ಪಡಬೇಕಾಯಿತು. ನಿರೀಕ್ಷೆಗೂ ಮೀರಿ ಜನತಾ ಜಲಧಾರೆ ಸಮಾವೇಶದ ಈ ಝಲಕ್ ಗಂಗಾಧಾರೆಯಲ್ಲಿ ಜನಸಾಗರ ಜಮಾವಣೆವಾಗಿತ್ತು. ಕುಂಭ ಮೆರವಣೆಗೆ ವೇಳೆ ಡೋಳಿನ ನಾದ ಮಾರ್ದನಿಸಿತ್ತು. ಹುಲಿ ವೇಷ ತೊಟ್ಟಿದ ಚರ್ಮ ಧಾರಿಗಳ ರಾಜಾವೇಷದ ನಡಿಗೆ,ಕುಣಿತ,ಯಕ್ಷಗಾನದ ಝಲಕ್ ಬಗೆಬಗೆ ವಿವಿಧ ನಾನಾ ರಂಜನೀಯ ನೋಟಗಳು ಗೋಚರಿಸಿ ಕಣ್ಮನ ಸೆಳೆದವು. ಅದರಲ್ಲಿ ಲಂಬಾಣಿ ಉಡುಗೆ ತೋಡುಗೆಗಳನ್ನು ಅಪಾರ ಸಂಖ್ಯೆಯಲ್ಲಿ ಮಹಿಳಾ ಮಣಿಗಳು ಧರಿಸಿ ತಲೆ ಮೇಲೆ ಕಲಶ ಕುಂಭ ಹೊತ್ತು ಕುಣಿದ ನೃತ್ಯ ದೃಶ್ಯವಂತೂ ಜನಾಕರ್ಷಣೆ ಕೇಂದ್ರ ಬಿಂದುವಾಗಿತ್ತು. ಹತ್ತು ತಂಡಗಳು ಒಂದೇ ತೆರನಾಗಿ ಬಂಜಾರಾ ಸಮೂದಾಯದ ಮೂಲ ಉಡುಗೆ ತೊಡುಗೆ ಧರಿಸಿ ಕುಣಿದು ಕುಪ್ಪಳಿಸಿದರು.ಅದಕ್ಕೆ ಜನ ಫಿದಾ ಅದರು! ಶಾಸಕ ದೇವಾನಂದ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ವಿಜಯಪುರ ಜಿಲ್ಲಾ ಧುರೀಣೆ ಡಾ.ಸುನೀತಾ ದೇವಾನಂದ ಚವ್ಹಾಣ, ಜೆಡಿಎಸ್ ಬಾಗಲಕೋಟ ಜಿಲ್ಲಾಧ್ಯಕ್ಷ ಮಾವಿನಮರದ,ವಿಜಯಪುರ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ,ಮುಖಂಡ ರಾಜುಗೌಡ ಪಾಟೀಲ, ಬಿ.ಡಿ.ಪಾಟೀಲ, ಬಸವರಾಜ ಹೊನವಾಡ ಸೇರಿದಂತೆ ಪಕ್ಷದ ಹಲ ಧುರೀಣರು ವೇದಿಯಲ್ಲಿದ್ದರು. ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
ಹಣಮಂತ ಮಾವಿನಮರದ ಸ್ವಾಗತಿಸಿದರು. ಎಂ.ಎಚ್.ಎಂ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಮಹೇಶ್ ಗಾಳಪ್ಪಗೋಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು ಲೋಹಿತ ವಂದಿಸಿದರು

Leave a Reply

Your email address will not be published. Required fields are marked *

You May Also Like

ಸಿದ್ಧರಾಮಯ್ಯ ಗೆ ಅಹಿಂದ ಮತದಾರರ ಬೆಂಬಲ

ಉತ್ತರಪ್ರಭ ಸುದ್ದಿ ಬಸವನಬಾಗೇವಾಡಿ: ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ…

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.

ಸಿಡಿ ಪ್ರಕರಣ : ನಾಲ್ವರು ಎಸ್ಐಟಿ ವಶಕ್ಕೆ

ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸಿಡಿ ಪ್ರಕರಣದಲ್ಲಿ ಯುವತಿ ಸೇರಿ ನಾಲ್ವರ ವಶಕ್ಕೆ ಪಡೆಯಲಾಗಿದೆ.

ಆಮಿಷದ ಆಡಿಯೋ, ಪೊಲೀಸ್, ಕೋರ್ಟ್. ರೆಸಾರ್ಟ್ : ರಾಡಿಯೆದ್ದಿರುವ ರಾಜಸ್ತಾನ ರಾಜಕೀಯ

ಬರುವ ಮಂಗಳವಾರ ಸಾಯಂಕಾಲ 5.30ರವರೆಗೂ ಅರ್ಜಿದಾರರ (ಸಚಿನ್ ಪೈಲಟ್ ಬಣದ ಶಾಸಕರು) ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ತಾನ ಹೈಕೋರ್ಟ್ ವಿಭಾಗೀಯ ಪೀಠ ವಿಧಾನಸಭೆಯ ಸ್ಪೀಕರ್ ಗೆ ಸೂಚಿಸಿದೆ.