ಗುಲಾಬಚಂದ ಜಾಧವ

ಉತ್ತರಪ್ರಭ
ಆಲಮಟ್ಟಿ: ಜಂಗಮರ ನೆಲೆ ಆಲಮಟ್ಟಿ ಬಹುಭಾಗ ಲಾಲ್ ಬಹದ್ದೂರ್ ಜಲಾಶಯದ ತೆಕ್ಕೆಯಲ್ಲಿದೆ. ಹಲ ಐತಿಹ್ಯ ಹಾಗು ಪಾವಿತ್ರ್ಯತೆಗೆ ಹೆಸರಾಗಿ ಪ್ರವಾಸಿ ತಾಣವಾಗಿ ಮಿನುಗುತ್ತಲ್ಲಿದೆ. ಇಂತಹ ಅಪರೂಪದ ವೈವಿಧ್ಯಮಯ ಊರಿನ ಕೃಷ್ಣಾ ನದಿತೀರದಲ್ಲಿ ನೆಲೆಯೂರಿರುವ ಶಕ್ತಿದೇವತೆ, ಜಾಗೃತದೇವಿಯಾಗಿ ಹೊರಹೊಮ್ಮಿರುವ ಚಂದ್ರಗಿರಿಯ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವ ಮಾ.10 ಗುರುವಾರದಿಂದ ಮೂರು ದಿನಗಳಕಾಲ ಸಡಗರದಿಂದ ಜರುಗಲಿದೆ.


ಈ ಭಾಗದ ಆರಾಧ್ಯ ದೇವತೆ ಭಕ್ತರ ಆಶೋತ್ತರಗಳನ್ನು ಈಡೇರಿಸುವ ಶಕ್ತಿದೇವತೆ ಎಲ್ಲ ಕಷ್ಟಕೋಟಲೆಗಳನ್ನು ನೀಗಿಸುತ್ತಾಳೆಂಬ ಆಶಾಭಾವ ಭಕ್ತರ ಮನದಲ್ಲಿದೆ. ಆ ಪ್ರತೀತಿಯೂ ಪ್ರಚಲಿತದಲ್ಲಿದೆ. ಹೀಗಾಗಿ ಭಕ್ತರು ಆರಾಧ್ಯದೇವಿಗೆ ಮೊರೆ ಹೋಗಿ ಶೃದ್ಧಾಭಕ್ತಿಯಿಂದ ಪ್ರಾಥಿ೯ಸಿ ಚಂದ್ರಮ್ಮದೇವಿಯನ್ನು ಆರಾಧಿಸುತ್ತಾರೆ.
ನಿಸರ್ಗದ ಮಡಿಲಲ್ಲಿರುವ ಚಂದ್ರಮ್ಮಳ ಅಪಾರ ಶಕ್ತಿ ಪ್ರಭಾವದಿಂದ ಈ ಕ್ಷೇತ್ರ ಪವಿತ್ರ ಸ್ಥಳವಾಗಿ ಇಂದು ಎಲ್ಲರ ಗಮನ ಸೆಳೆದು ಆಕರ್ಷಸಿಸುತ್ತಿದೆ.
ಪೌರಾಣಿಕ, ಐತಿಹಾಸಿಕ ಇತಿಹಾಸದ ಹಿನ್ನೆಲೆಯಿಂದ ಚಂದ್ರಮ್ಮದೇವಿ ಪ್ರಸಿದ್ಧಿ ಸ್ಥಾನ ಅಲಂಕರಿಸುತ್ತಾ ದೈವ ಸಾಕ್ಷಾತ್ಕಾರದ ಕಳೆ ಮೊಳಗಿಸುತ್ತಿದ್ದಾಳೆ.
ಕೃಷ್ಣೆ ತಟದಲ್ಲಿನ ರಮಣಿಯ ತಾಣದಲ್ಲಿ ಜಾತ್ರೆಯಂಗವಾಗಿ ಶಕ್ತಿ ದೇವತೆ ಚಂದ್ರಮ್ಮಾದೇವಿಗೆ ಬೆಳಗಿನ ಜಾವದಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರೆಯಲ್ಲಿ ಹಲವಾರು ಕಲಾವಿದರಿಂದ ವಿವಿಧ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಯಲ್ಲಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರು ತಂಡೋಪತಂಡಗಳಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಹಲವರು ಹೊತ್ತ ಹರಿಕೆ ತೀರಿಸಿ ಪುನೀತ ಭಾವ ತಾಳುತ್ತಾರೆ. ದೂರದೂರದ ಊರುಗಳಿಂದ ಬರುವ ಭಕ್ತರು ಜಾತ್ರೆ ಮುನ್ನವೇ ಒಂದೆರಡು ದಿನ ಮುಂಚಿತ ಆಗಮಿಸುತ್ತಾರೆ. ಇನ್ನೂ ಅನೇಕ ಭಕ್ತರು, ವ್ಯಾಪಾರಸ್ಥರು ಜಾತ್ರೆ ಸಂಪನ್ನಗೊಂಡ ಮರುದಿನದವರೆಗೆ ಇಲ್ಲಿ ಅಲ್ಲಲ್ಲಿ ಸಾಮಾನು ಸರಂಜಾಮುಗಳೊಂದಿಗೆ ಠಿಕಾಣಿ ಹೂಡುತ್ತಾರೆ. ಒಂದೆರಡು ದಿನದ ಬಳಿಕ ಜಾಗ ಖಾಲಿ ಮಾಡಿ ತಮ್ಮತಮ್ಮ ಊರಿನಡೆಗೆ ಸಾಗುತ್ತಾರೆ.
ಮೂರು ದಿನದಲ್ಲಿ ಕನಿಷ್ಠ ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ನೂರಾರು ಸಂಖ್ಯೆಯ ಜೋಗಮ್ಮಗಳು ಇದ್ದು, ಜೋಗತಿ ಪದ ಹಾಡುತ್ತಾರೆ. ಅವಳಿ ಜಿಲ್ಲೆಯ ನಾನಾ ಚಂದ್ರಮ್ಮ ದೇವಸ್ಥಾನಗಳಿದ್ದು, ಅವಗಳಿಗೆಲ್ಲ ಆಲಮಟ್ಟಿ ಮೂಲಸ್ಥಾನ. ಪ್ರತಿ ಮಂಗಳವಾರ ಹಾಗೂ ಗುರುವಾರ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ಚಂದ್ರಮ್ಮದೇವಿ ಜಾತ್ರೆ ಕೋವಿಡ್ ಹಾವಳಿಯಿಂದ ಕಳಾಹೀನವಾಗಿತ್ತು. ಈ ಬಾರಿ ವೈರಸ್‌ ಕ್ಷೀಣಸಿರುವ ಪರಿಣಾಮ ಜಾತ್ರೆ ವೈಭವದ ಸಂಭ್ರಮಕ್ಕೆ ಇದೀಗ ಮತ್ತೆ ಕಳೆ ಬಂತಂತಾಗಿದೆ. ಆದಾಗ್ಯೂ ಜನ, ಭಕ್ತರು ಮೈಮರೆಯದೆ ಸುರಕ್ಷಿತೆ ನಿಯಮಾವಳಿಗಳನ್ನು ಪಾಲಿಸಿಕೊಂಡು ಬರುವುದು ಅದ್ಯ ಕರ್ತವ್ಯವಾಗಿದೆ.
ಪ್ರಸ್ತುತ ಮೂರು ದಿನಗಳ ಕಾಲ ನಡೆಯುವ ಜಗನ್ಮಾತೆಯ ಜಾತ್ರೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತನು, ಮನ, ಧನವನ್ನು ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಧರ್ಮರ ಮಠದ ಧರ್ಮಾಧಿಕಾರಿ ಸೋಮರಾವ ದೇಸಾಯಿ ಹಾಗೂ ಚಂದ್ರಮ್ಮದೇವಿ ಸೇವಾಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಕೃಷ್ಣೆಯ ಹಿನ್ನೀರಿನಲ್ಲಿ ಮೊಸಳೆಗಳಿರುವದರಿಂದ ಯಾರೂ ನೀರಿಗೆ ಇಳಿಯಬಾರದೆಂದು ಭಕ್ತರಲ್ಲಿ ವಿನಂತಿಸಿದ್ದಾರೆ.
ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯ ಭಕ್ತ ವೃಂದದವರು ನದಿ ದಂಡೆಗಳಲ್ಲಿ ಮಲೀನವಾಗದಂತೆ ನೋಡಿಕೊಳ್ಳಬೇಕು. ಆ ದಿಸೆಯಲ್ಲಿ ಜಾಗರೂಕತೆ ವಹಿಸಬೇಕು ಎಂಬುದು ಪ್ರಜ್ಞಾವಂತರ ಕೋರಿಕೆಯಾಗಿದೆ. ಜಾತ್ರೆ ಮುಗಿದ ಬಳಿಕ ಎಲ್ಲೆಂದರಲ್ಲಿ ನದಿದಂಡೆಯಲ್ಲಿ ಅಶುಚಿತ್ವ ವ್ಯಾಪಕವಾಗಿ ಗೋಚರಿಸುತ್ತದೆ. ಶುಚಿತ್ವಕ್ಕೆ ಹರಸಾಹಸ ಪಟ್ಟಿರುವಂಥ ಸನ್ನಿವೇಶಗಳನ್ನು ಇಲ್ಲಿಗ ಸ್ಮರಿಸಬಹುದು. ಚಂದ್ರಮ್ಮದೇವಿ ಆರಾಧಿಸುವ ಮನಗಳು ಶುಚಿತ್ವ ಕಾಪಾಡಲಿ ಎಂಬುದೇ ಪರಿಸರವಾದಿಗಳ ಆಶಯವಾಗಿದೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ-ಹೊರಹರಿವು ಯಥಾಸ್ಥಿತಿ..!

ಉತ್ತರಪ್ರಭಆಲಮಟ್ಟಿ: ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೃಷ್ಣಾ ನದಿಯ ಮೂಲಕ ಹರಿದು ಬರುತ್ತಿರುವ ನೀರಿನ…

ಭಾವಪೂರ್ಣ ಶ್ರಧ್ಧಾಂಜಲಿ

ಶ್ರೀ ಮಹಾಂತಪ್ಪ ಬಸಪ್ಪ ಬಡ್ನಿಉತ್ತರಪ್ರಭ ಸುದ್ದಿಗದಗ: ಸಹೃದಯಿ, ಸರಳರು, ಬಸವ ಅನುಯಾಯಿಗಳು ಹಾಗೂ ಗಣ್ಯ ಉದ್ಯಮಿಗಳಾದ…

ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉತ್ತರಪ್ರಭ ಕಾರಟಗಿ: ಎಸ್ ಎಸ್ ಕಲಾ ಸಂಗಮ ಟ್ರಸ್ಟ್ ( ರಿ ) ಬೆಂಗಳೂರು ವತಿಯಿಂದ…

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ:ಶಾಸಕ ಬಂಡಿ

ಮನಸೊರೆಗೊಂಡ ಮಲ್ಲಕಂಬ ಪ್ರದರ್ಶನ ಉತ್ತರಪ್ರಭ ನರೆಗಲ್ಲ: ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ…