ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಜೂ.5ರಂದು ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಗಾವಿ ಬಳಿ ಸ್ಥಾಪಿಸಲ್ಪಟ್ಟ ಗ್ರಾಮೀಣಾಭಿವೃದ್ಧಿ ವಿವಿ ನೂತನ ಕ್ಯಾಂಪಸ್ ಅನ್ನು ಹಚ್ಚಹಸಿರು ಕ್ಯಾಂಪಸ್ ಆಗಿ ನಿರ್ಮಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನೂತನ ಕ್ಯಾಂಪಸ್ನ ಸಬರಮತಿ ಆಶ್ರಮ, ಸ್ಮೃತಿ ವನ, ಜೀವ ವೈವಿಧ್ಯ ವನ, ಸಸ್ಯ ಶಿಶುಪಾಲನಾ ಕೇಂದ್ರ, ದೇಸಿ ಯೋಜನೆ ಒಳಗೊಂಡು ಹತ್ತು ವಿವಿಧ ಸ್ಥಾನಗಳಲ್ಲಿ 100ಕ್ಕೂ ಅಧಿಕ ಪ್ರಾಧ್ಯಾಪಕರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿಯವರು ಸೇರಿ ಏಕಕಾಲದಲ್ಲಿ 500 ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಯನ್ನು ಜೂ.5 ರಂದು ಅನುಷ್ಠಾನಗೊಳಿಸಲಾಗುವುದು. ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೋವಿಡ್-19 ಕಾರಣದಿಂದಾಗಿ ಅವರು ತಮ್ಮ ಮನೆಗಳಲ್ಲಿ ವಾಸವಾಗಿರುತ್ತಾರೆ.
ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಈ ಸತ್ಕಾರ್ಯದಲ್ಲಿ ಭಾಗಿಯಾಗಲು ಪ್ರಯಾಣ ಮಾಡುವುದು ಕಷ್ಟ ಸಾಧ್ಯವಾಗಿದ್ದರಿಂದ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ಥಾನಗಳಲ್ಲಿ ಕನಿಷ್ಠ ಒಂದು ಸಸಿ ನೆಟ್ಟು, ಸೆಲ್ಫಿ ತೆಗೆದು ವಿಶ್ವವಿದ್ಯಾಲಯದೊಂದಿಗೆ ಹಂಚಿಕೊಳ್ಳುವ “ನನ್ನ ಗಿಡ ನನ್ನ ಉಸಿರು” ಎಂಬ ವಿನೂತನವಾದ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಮೂಲಕ ಈ ವರ್ಷದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಹಾಗೂ ಅತಿ ವಿಶಿಷ್ಟವಾಗಿ ಆಚರಿಸಲಾಗುವುದು ಹಾಗೂ ವಿಶ್ವವಿದ್ಯಾಲಯವು ಜಿಲ್ಲೆಯಲ್ಲಿ ವಿಶೇಷ ಅಗತ್ಯವುಳ್ಳ 20 ಶಾಲೆಗಳನ್ನು ದತ್ತು ಪಡೆದುಕೊಂಡಿರುತ್ತದೆ. ಈ ಶಾಲೆಗಳ ಪೈಕಿ ಪ್ರಸ್ತುತ 2 ಶಾಲೆಗಳಲ್ಲಿ ಔಷಧ ವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಎಲ್. ಲಕ್ಕಣ್ಣವರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪಂಚವಟಿ ಅಭಿಯಾನ (ಆಕ್ಸಿಜನ್ ಟವರ್)
ಪಂಚವಟಿ ವನದಲ್ಲಿ ಅತಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವ ಹತ್ತಿ, ಬನ್ನಿ, ಬೇವು, ಅರಳಿ, ಪತ್ರಿ ಮರಗಳನ್ನೊಳಗೊಂಡಿರುತ್ತದೆ. ಈ ಅಭಿಯಾನವನ್ನು ವಿಶ್ವವಿದ್ಯಾಲಯದ ಸಿಬ್ಬಂದಿಗಳ ಸಹಕಾರದೊಂದಿಗೆ ಸುತ್ತಮುತ್ತಲಿನ ಪ್ರತಿಯೊಂದು ಗ್ರಾಮಗಳಲ್ಲಿ ಅನುಷ್ಠಾನಗೊಳಿಸುವ ಮಹತ್ವಾಕಾಂಕ್ಷೆಯನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹೊಂದಿದ್ದಾರೆ.