ಲಕ್ಷ್ಮೇಶ್ವರ: ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿ ಪರಶುರಾಮ ಗೋಣೆಪ್ಪ ಗುಡದರ ಈತನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವವಾಧಿ ಶಿಕ್ಷೆ ಹಾಗೂ 5000 ದಂಡ ವಿಧಿಸಿದೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ 2017 ಜುಲೈ 29ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ರಾಜಶೇಖರ ಪಾಟೀಲ ತೀರ್ಪು ಹೊರಡಿಸಿದ್ದಾರೆ. ಕಟ್ಟಡ ಕಾರ್ಮಿಕನಾಗಿದ್ದ ಪರಶುರಾಮ ಗುಡದರ, ಅಣ್ಣಪ್ಪ ಗಜಕೋಶ ಮತ್ತು ಆತನ ಚಿಕ್ಕಪ್ಪ ಸೋಮನಾಥ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮನಾಥ ಮದ್ಯ ಸೇವನೆ ಮಾಡಿದಾಗಲೆಲ್ಲಾ ಪರಶುರಾಮ ಗುಡದರ ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಲ್ಲದೇ ಆತನ ಬಳಿಯಿದ್ದ ಹಣವನ್ನು ಕಿತ್ತುಕೊಳ್ಳುತ್ತಿದ್ದ.
2017 ಜುಲೈ 29ರಂದು ಪರಶುರಾಮ, ಸೋಮನಾಥ ಕಿಸೆಯಿಂದ 120ರೂ. ಕಿತ್ತುಕೊಂಡಿದ್ದ ವಿಷಯ ಕೊಲೆಯಲ್ಲಿ ಅಂತ್ಯಗೊಂಡಿತ್ತು. ಈ ವಿಚಾರವಾಗಿ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ತನಿಖೆ ನಡೆದು ಪರಶುರಾಮ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.