ತೆಲಂಗಾಣ: ವಿಧಿ ಎಂಥ ಕ್ರೂರಿ ಅಲ್ಲವೇ..? ಯಾರ ಬಾಳಲ್ಲಿ ಹೇಗೆಲ್ಲಾ ಆಟ ಆಡುತ್ತೋ ಗೊತ್ತೇ ಆಗುವುದಿಲ್ಲ. ಅದರಲ್ಲೂ ಕೊರೊನಾದ ಈ ದಿನಗಳಲ್ಲಿ ಇಂದು ಮಾತಾಡಿದವರು ನಾಳೆ ಇಲ್ಲವಾಗುತ್ತಿದ್ದಾರೆ. ಈಗ ಮಾತಾಡಿದವರು ಆ ಕ್ಷಣಕ್ಕೆ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಕನೋರ್ವ ತಾಯಿಯ ಮೃತದೇಹದ ದುರಿಗೆ ದಾಂಪತ್ಯಕ್ಕೆ ಕಾಲಿಟ್ಟು ಸಪ್ತಪದಿ ತುಳಿದ ಘಟನೆ ನಡೆದಿದೆ. ಈ ಮನಕಲಕುವ ಘಟನೆ ಕಂಡ ಗ್ರಾಮಸ್ಥರು ದೂರದಿಂದಲೇ ಕಣ್ಣೀರಿಟ್ಟಿದ್ದಾರೆ.
ಎಂಥ ಮನಕಲಕುವ ಸಂಗತಿಯಲ್ಲವೇ. ಛೇ..!, ಹೌದು ಇಲ್ಲಿನ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ಈ ಮನ ಕಲಕುವ ಘಟನೆ ನಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಾಯಿ ಮೃತಪಟ್ಟಿದ್ದು, ತಾಯಿಯ ಆಶೀರ್ವಾದಕ್ಕಾಗಿ ಮಗ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಮದುವೆ ಈಗಾಗಲೇ ಮೇ.21 ರಂದು ನಿಶ್ಚಯವಾಗಿತ್ತು. ಇದಕ್ಕಾಗಿ ಆತ ಅಮೆರಿಕಾದಿಂದ ಊರಿಗೆ ಬಂದಿದ್ದ. ಆದರೆ 49 ವರ್ಷದ ತಾಯಿ ಕೊರೊನಾ ಸೋಂಕು ತಗುಲಿದ್ದರಿಂದ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಮತ್ತೊಂದೆಡೆ ರಾಕೇಶ್ ಮಾವ ಕೂಡ ಮೃತಪಟ್ಟಿದ್ದು, ಮದುವೆ ಮುಂದೂಡಲಾಗಿತ್ತು. ಆದರೆ ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ನಂತರ ತಾಯಿ ಆಶೀರ್ವಾದ ಪಡೆದು ಮದುವೆಯಾಗಲು ಬಯಸಿದ್ದ ರಾಕೇಶ್ ಗೆ ಮತ್ತೊಂದು ಆಘಾತ ಕಾದಿತ್ತು. ಆತನ ತಾಯಿಯೂ ಕೋವಿಡ್ ನಿಂದ ಸಾವನ್ನಪ್ಪಿದ್ದು, ಮೃತದೇಹವನ್ನು ಊರಿಗೆ ತರಲಾಗಿದ್ದು, ಅಮ್ಮನ ಮೃತದೇಹದ ಎದುರಲ್ಲೇ ದುಃಖದ ಮಡುವಿನಲ್ಲಿ ರಾಕೇಶ್ ಮದುವೆಯಾಗಿದ್ದಾನೆ. ತಾಯಿಯ ಆಶೀರ್ವಾದ ಪಡೆದು ಮದುವೆಯಾಗಬೇಕೆಂದು ಅಮೆರಿಕದಿಂದ ಬಂದಿದ್ದ ರಾಕೇಶ್ ಮೃತದೇಹದ ಎದುರು ಮದುವೆಯಾಗಬೇಕಾದ ಪರಿಸ್ಥಿತಿ ಬಂದಿದೆ.