ಗಜೇಂದ್ರಗಡ: ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಕೋಟೆ ನಾಡಿನಲ್ಲಿ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೇ ಸಾರ್ವಜನಿಕರು ಗುಂಪು ಗುಂಪಾಗಿ ಮೈಮರೆತು ಓಡಾಡುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.
ಗಜೇಂದ್ರಗಡ ತಾಲೂಕಿನಲ್ಲಿ ಕೊರೊನಾ 2ನೇ ಅಲೆಯ ಪ್ರಕರಣಗಳು ದಾಖಲಾಗದಿದ್ದರೂ ಸಹ ಸಹ ಜನ ಮಾತ್ರ ಜಾಗೃತರಾಗದೇ ಮೈಮರೆತಿದ್ದಾರೆ. ಗ್ರಾಮೀಣ ಭಾಗದಿಂದ ವ್ಯಾಪಾರ ವಹಿವಾಟಿಗೆ ಆಗಮಿಸುವ ಜನರು ಮಾರುಕಟ್ಟೆಯಲ್ಲಿ ಗಿಜಿಗುಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ಹಾಗೆಯೇ ಓಡಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚು ಪರಾಕ್ರಮ ಮೆರೆಯುತ್ತಿದೆ. ಸಾರ್ವಜನಿಕರು ಸ್ವಯಂ ರಕ್ಷಣೆಗೆ ಮುಂದಾಗಬೇಕು. ನಾವು ಯಾರನ್ನೂ ನೆಚ್ಚಿಕೊಳ್ಳಬಾರದು. ಕಡ್ಡಾಯ ಮಾಸ್ಕ್ ಧರಿಸಬೇಕು. ಪಟ್ಟಣದಲ್ಲಿ ಕಡ್ಡಾಯ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳುವಲ್ಲಿ ಸಂಬಂಧ ಪಟ್ಟ ಇಲಾಖೆಗಳು ವಿಫಲವಾಗಿವೆ.
-ಮಕ್ತುಮಸಾಬ ಮುಧೋಳ, ಜೆಡಿಎಸ್ ತಾಲೂಕಾಧ್ಯಕ್ಷ.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ವಕ್ರದೃಷ್ಟಿ ತಾಗಿದರೂ ಸಹ ಗಜೇಂದ್ರಗಡ ತಾಲೂಕಿನಲ್ಲಿ ಈವರೆಗೂ ಯಾವೊಂದು ಪ್ರಕರಣಗಳು ಕಂಡು ಬಂದಿಲ್ಲ. ಇದರಿಂದ ನಿಟ್ಟುಸಿರು ಬಿಟ್ಟಿರುವ ಕೋಟೆ ನಾಡಿನ ಜನತೆ ನಿರ್ಭಿತಿಯಿಂದ ತಮ್ಮ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಗ್ರೀನ್ ಝೋನ್ನಲ್ಲಿ ಕಾಣಿಸಿಕೊಂಡ ಪಟ್ಟಣದ ಜನತೆ ಜಾಗೃತಿ ವಹಿಸದಿದ್ದರೆ, ಪ್ರಕರಣ ದಾಖಲಾದರೂ ಆಶ್ಚರ್ಯವಿಲ್ಲ.
ಪಟ್ಟಣದಲ್ಲಿ ಸರ್ಕಾರಿ ಕಚೇರಿ, ಖಾಸಗಿ ಕಚೇರಿ ಸೇರಿದಂತೆ ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳಿಂದ ಹಿಡಿದು ಸಾರ್ವಜನಿಕರು ಸಹ ಮಾಸ್ಕ್ ಧರಿಸದೇ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನು ಜೋಡು ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಂತೂ, ಮಾಸ್ಕ್ಗೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಭೀತಿಗೆ ಕಾರಣವಾಗಿದೆ.
ಮಾರ್ಗಸೂಚಿಗಿಲ್ಲ ಬೆಲೆ
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕಡ್ಡಾಯ ಮಾಸ್ಕ್ ಬಳಕೆಯ ಮಾರ್ಗಸೂಚಿ ಹೊರಡಿಸುವುದಲ್ಲದೇ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಳು ಆದೇಶಿಸಿದ್ದಾರೆ. ಆದರೆ ಪಟ್ಟಣದಲ್ಲಿ ಸರ್ಕಾರದ ನಿಯಮಗಳ ಪಾಲನೆಗೆ ಬೆಲೆಯೇ ಇಲ್ಲದಂತಾಗಿದೆ. ಆಗೊಮ್ಮೆ, ಈಗೊಮ್ಮೆ ಪೊಲೀಸ್ರು ದಂಡ ವಿಧಿಸುವುದನ್ನು ಬಿಟ್ಟರೆ, ಸಾರ್ವಜನಿಕರಿಗಾಗಲೇ, ಅಂಗಡಿ ವ್ಯಾಪಾರಸ್ಥರಿಗಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರದ ಮಾರ್ಗಸೂಚಿಗೆ ಬೆಲೆಯೇ ಇಲ್ಲದಂತಾಗಿದೆ.
ಈಗಾಗಲೇ ಬೆಂಗಳೂರ, ಮಂಗಳೂರ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಗುಳೆ ಹೋಗಿದ್ದ ಜನರು ತಾಲೂಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಸೊಂಕಿತ ಪ್ರದೇಶಗಳಿಂದ ನಿತ್ಯ ಹಲವಾರು ಜನ ತಂಡೋಪ ತಂಡವಾಗಿ ಹಳ್ಳಿಗಳಿಗೆ ಆಗಮಿಸುತ್ತಿದ್ದಾರೆ. ಇದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಆರೋಗ್ಯ ಇಲಾಖೆಯಾಗಲಿ, ತಾಲೂಕಾಡಳಿತವಾಗಲಿ, ಈವರೆಗೂ ಸೊಂಕಿತ ಪ್ರದೇಶದಿಂದ ಆಗಮಿಸುವವರ ಮೇಲೆ ನಿಗಾ ವಹಿಸದಿರುವುದು ಅವಘಡಗಳು ಸೃಷ್ಟಿಗೆ ಕಾರಣವಾಗಲಿದೆ ಎನ್ನುವುದು ಜನಸಾಮಾನ್ಯರ ದುಗುಡವಾಗಿದೆ.
ಮಾಯವಾದ ಸಾಮಾಜಿಕ ಅಂತರ
ಪಟ್ಟಣದಲ್ಲಿ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಕಿರಾಣಿ, ತರಕಾರಿ ಖರೀದಿ ಮಾಡುವ ಸಂದರ್ಭದಲ್ಲಿ ಮುಗಿ ಬೀಳುತ್ತಿದ್ದಾರೆ. ಪಟ್ಟಣದ ಬಹುತೇಕ ಅಂಗಡಿ ವ್ಯಾಪಾರಸ್ಥರು ಸ್ಯಾನಿಟೈಸರ, ಸಾಮಾಜಿಕ ಅಂತರ ಮರೆತು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಪಟ್ಟಣಕ್ಕೆ ನೆರೆಯ ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯ ಹಲವಾರು ಗ್ರಾಮಗಳ ಜನರು ಆಗಮಿಸುತ್ತಾರೆ. ಇಂತಹ ಭಯದ ವಾತಾವರಣವಿರದ್ದರೂ ಜನರು ಮಾತ್ರ ಮೈಮರೆತು ಬೀದಿಗಿಳಿಯುತ್ತಿರುವುದು ಮತ್ತಷ್ಟು ಅವಘಡಗಳಿಗೆ ಕಾರಣವಾಗುವ ಭೀತಿ ಶರುವಾಗಿದೆ.