ಬೆಂಗಳೂರು: ಬೇಡಿಕೆ ಇಡೆರಿಕೆಗೆ ಒತ್ತಾಯಿಸಿ ಏ.7 ರಿಂದಲೇ ರಾಜ್ಯವ್ಯಾಪಿ ಎಲ್ಲ ನಿಗಮಗಳಲ್ಲಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ಹಿನ್ನೆಲೆ ಸರ್ಕಾರಿ ಬಸ್ ಗಳು ರಸ್ತೆಗೆ ಇಳಿಯುತ್ತಿಲ್ಲ. ಸಾರಿಗೆ ನೌಕರರ ಮುಷ್ಕರ ಕಾರಣದಿಂದ ಖಾಸಗಿ ವಾಹನಗಳಿಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಇದರಿಂದ ನೊಂದ ವಿದ್ಯಾರ್ಥಿನಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ನಾವು ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದೇವೆ. ಆದರೆ ನಮ್ಮ ಬಳಿ ಪಾಸ್ ಇದ್ದರೂ ಹಣ ಕೊಟ್ಟು ಸಂಚಾರ ಮಾಡಬೇಕಾಗುತ್ತಿದೆ. 2 ದಿನದಿಂದ ಹೆಚ್ಚುವರಿ ಹಣ ನೀಡಿ ಬಸ್ನಲ್ಲಿ ಸಂಚರಿಸುತ್ತಿದ್ದೇವೆ. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ. ಇದು ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಪದ್ಧತಿ. ಹೀಗಾಗಿ ₹10 ಲಕ್ಷ ಪರಿಹಾರ ನೀಡಬೇಕೆಂದು ವಿದ್ಯಾರ್ಥಿನಿ ಪಾವನ ಕೋಡಿಹಳ್ಳಿ ಚಂದ್ರಶೇಖರ್ರಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಕೆಂಗೇರಿ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನಲ್ಲಿ ಬಿಇ ಮೊದಲ ಸೆಮಿಸ್ಟರ್ ಓದುತ್ತಿರುವ ತುಮಕೂರಿನ ಪಾವನ ಎಂಬ ವಿದ್ಯಾರ್ಥಿನಿ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸರ್ಕಾರಿ ಸಾರಿಗೆ ಸಂಚಾರ ಬಂದ್ ಆಗಿದ್ದು ಇದರಿಂದ ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಆದ್ರೆ ಮುಷ್ಕರದ ಲಾಭ ಪಡೆದು ಖಾಸಗಿ ಬಸ್ಗಳು, ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು ಇದರ ವಿರುದ್ಧ ಧ್ವನಿ ಎತ್ತಿ ವಿದ್ಯಾರ್ಥಿನಿಯೊಬ್ಬರು ನೋಟಿಸ್ ಕಳಿಸಿದ್ದಾರೆ.