ಗದಗ: ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಂಸ್ಥೆಯಾಗಿ ಬೆಳೆಯಬೇಕಾಗಿದೆ. ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಚುಣಾಯಿತನಾದರೆ ಸಾಹಿತ್ಯ ಪರಿಷತ್ತನ್ನು ಸಾರ್ವಜನಿಕರಿಗೆ ವಿಶ್ವವಿದ್ಯಾಲಯದಂತೆ ಬೆಳಕು ಚೆಲ್ಲುವ ಕೆಲಸವನ್ನು ಸಾಹಿತ್ಯ ಪರಿಷತ್ತಿನ ಮೂಲಕ ಮಾಡುವೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿ.ಸಿ. ಚನ್ನೇಗೌಡ ಹೇಳಿದರು.
ರವಿವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೇ.9 ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ ಸಬಲೀಕರಣ ಸಮಿತಿಯ ವರದಿ ಅನುಷ್ಠಾನವಾಗುವಂತೆ ಯೋಜನೆ ಮಾಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆಯುವುದು, ಪುಸ್ತಕ ಖರೀದಿ ಸೇರಿದಂತೆ ಪರಿಷತ್ತಿನ ಎಲ್ಲ ಚಟುವಟಿಕೆಗಳು ಅಂತರ್ಜಾಲ (ಆನ್ಲೈನ್)ದ ಮೂಲಕ ನಡೆಯುವಂತೆ ಮಾಡುವ ಯೋಜನೆ ಹೊಂದಿದ್ದೇನೆ. ಶಾಶ್ವತ ನಿಘಂಟು ವಿಭಾಗ (ನಿಘಂಟಿನ ಪರಿಷ್ಕರಣ ನಿರಂತರವಾಗಿ ನಡೆಯುವಂತೆ ಮಾಡಲು) ಸ್ಥಾಪಿಸಲಾಗುವುದು. ಮಹತ್ವದ ಕನ್ನಡ ಸಾಹಿತ್ಯವನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸುವುವ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.
ಯುವ ಬರಹಗಾರರಿಗೆ ಹಾಗೂ ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಮತ್ತು ನಿರಂತರವಾಗಿ ಅವರ ಬೆಳವಣಿಗೆಗೆ ಪೂರಕವಾಗುವ ತರಬೇತಿ ಶಿಬಿರಗಳನ್ನು ನಡೆಸುವುದು. ಅಶಕ್ತ ಸಾಹಿತಿಗಳು ಹಾಗೂ ಕಲಾವಿದರಿಗೆ ಆರೋಗ್ಯ ವಿಮೆ ಜಾರಿಗೆ ತರುವುದು. ಎಲ್ಲ ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ. ಪರಿಷ್ಕೃತ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಲು ಅದಕ್ಕೆ ಆಂಧ್ರ ರಾಜ್ಯದ ಮಾದರಿ ಕಾನೂನು ಬಲ ತಂದು ಕೊಡಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ರಾಜ್ಯದ ಗಡಿಭಾಗಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಿರ್ದಿಷ್ಟ ಕಾರ್ಯಯೋಜನೆ. ಕನ್ನಡ ಬೆಂಗಳೂರು, ಸುಂದರ ಬೆಂಗಳೂರು ಆಂದೋಲನ ರೂಪಿಸಿ ಸರ್ಕಾರ, ಸಂಘ ಸಂಸ್ಥೆಗಳ ಸಹಕಾರದಿಂದ ನಿರಂತರ ಹೋರಾಟ ನಡೆಸುವುದು. ನಾಲ್ಕು ಕಂದಾಯ ವಲಯಗಳಲ್ಲಿ ಮಹಿಳಾ, ದಲಿತ, ವಚನ ಹಾಗೂ ದಾಸ ಸಾಹಿತ್ಯ ಮುಂತಾದ ಎಲ್ಲ ಸಾಹಿತ್ಯ ಪ್ರಕಾರಗಳ ಸಮಾವೇಶಗಳನ್ನು ನಡೆಸುವುದು. ಹೊರ ರಾಜ್ಯಗಳಲ್ಲಿ ಕನ್ನಡ ಸಮಾವೇಶಗಳನ್ನು ನಡೆಸುವ ಮೂಲಕ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತದೆ.
ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಕೃಷಿ ಹಾಗೂ ಇತರೆ ವೃತ್ತಿಗಳ ಸಾಹಿತ್ಯ ಸಮಾವೇಶಗಳನ್ನು ನಡೆಸುವುದು. ವಿವಿಧ ಕ್ಷೇತ್ರದ ತಜ್ಞರ ಸಲಹಾ ಸಮಿತಿ, ಕಾನೂನು ಘಟಕ, ಸಂಶೋಧನಾ ವಿಭಾಗ ತೆರೆಯುವುದು. ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ಎಲ್ಲ ಕನ್ನಡ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಸಾಮಾನ್ಯ ಕಾರ್ಯಕ್ರಮ ರೂಪಿಸಿ ನಿರಂತರ ಚಟುವಟಿಕೆ ನಡೆಸುವುದು. ಕರ್ನಾಟಕದ ಪರಂಪರೆಯನ್ನು ಪ್ರತಿಬಿಂಬಿಸುವ ಸ್ಥಿರಪ್ರದರ್ಶನವನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಅಮೃತೇಶ ಹೊಸಳ್ಳಿ, ಬಿ.ಎಂ.ಗಂಘಣ್ಣ, ಜೋತ್ಯಿಭಾ ಕೈರೋಜಿ, ಆರ.ಬಿ.ಕೊಣ್ಣುರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.