ಗದಗ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬ್ರಷ್ಟಾಚಾರ ಬೇರೂರಿದ್ದು, ಸಂಪೂರ್ಣವಾಗಿ ತೊಡೆದು ಹಾಕು ಕೆಲಸವಾಗಬೇಕಿದೆ. ಆದ್ದರಿಂದ ಈ ಬಾರಿ ಕರ್ನಾಟಕ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಉತ್ತರ ಕರ್ನಾಟಕದಿಂದ ನಾನು ಕೂಡ ಸ್ಪರ್ಧಿಸಲಿದ್ದೇನೆ ಎಂದು ಅಣ್ಣಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.
ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಾನು ಆಯ್ಕೆಯಾದರೆ, ಕಸಾಪವನ್ನು ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣದ ಗುರಿ ಹೊಂದಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳೆಯರಿಗೆ ಅಷ್ಟಾಗಿ ಮನ್ನಣೆ ದೊರೆಯುತ್ತಿಲ್ಲ. ಈ ಕಾರಣದಿಂದ ಕಸಾಪ ರಾಜ್ಯ ಮಟ್ಟದ ಮಹಿಳಾ ಘಟಕ ಪ್ರಾರಂಭಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನಿಡುವ ಉದ್ದೇಶ ಹೊಂದಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಡಿಜಿಟಲ್ ಸ್ಪರ್ಶ ನೀಡಿ, ಸರ್ವ ಸದಸ್ಯರಿಗೆ (ಸ್ಮಾರ್ಟ್ ಕಾರ್ಡ) ಗುರುತಿನ ಚೀಟಿ ನೀಡಲಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಯೋಚನೆ ಹೊಂದಿದ್ದೇನೆ ಎಂದರು.
ಹಿಂದಿನ ಅವಧಿಯಲ್ಲಿ ಕಸಾಪ ಸಮ್ಮೇಳನದಲ್ಲಿ ನಕಲಿ ಬಿಲ್ ತೆಗೆದು ಹಣ ಲೂಟಿ ಮಾಡಿದ್ದಾರೆ. ಪುಸ್ತಕ ಪ್ರಕಟಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಮ್ಮೇಳನ ಅಧ್ಯಕ್ಷರ ಆಯ್ಕೆಯಲ್ಲಿ ಹಣ, ಜಾತಿ ಪ್ರಭಾವ ಹಾಗೂ ರಾಜಕೀಯ ಒತ್ತಡದಿಂದ ಕಸಾಪ ಸಂಪೂರ್ಣ ಭ್ರಷ್ಟಾಚಾರ ಕುಡಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಅಯ್ಕೆಯಾದರೆ ಇದರಿಂದ ಕಸಾಪವನ್ನು ಮುಕ್ತಗೊಳಿಸುತ್ತೇನೆ.
-ರಾಜಶೇಖರ ಮುಲಾಲಿ, ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ದೂರದ ಜಿಲ್ಲೆಗಳಿಂದ ಕಸಾಪ ಕೇಂದ್ರ ಕಚೇರಿಗೆ ಬರುವಂತ ಸಾಹಿತಿಗಳಿಗೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸುವುದು, ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡಲಾಗುವುದು. ರಾಜ್ಯದ ಗಡಿ ಭಾಗಗಳ ಹಾಗೂ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರ ಸ್ಮರಣೆಯಲ್ಲಿ ಕಿರು ಪುಸ್ತಕಮಾಲೆ ಪ್ರಾರಂಭಿಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆ ಸಾಹಿತ್ಯ ಪರಿಷತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವತ್ತ ಸಾಗಬೇಕಿದೆ. ಕನ್ನಡ ನಾಡಿನ ಪ್ರಾಥಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಅಸ್ಮಿತೆಯಾಗಿದೆ. 1915 ರಲ್ಲಿ ಚಾಲನೆ ಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಶತಮಾನ ಕಂಡಿದೆ. ಆದರೆ, ಸಾಹಿತ್ಯ ಪರಿಷತ್ತು ರಾಜಕಾರಣ ಹಾಗು ಬ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ. ಇದರಿಂದ ಕಸಾಪವನ್ನು ಮುಕ್ತ ಮಾಡಬೇಕು ಎನ್ನುವ ಕಾರಣಕ್ಕೆ ನಾನು ಸ್ಪರ್ಧೆಗೆ ಮುಂದಾಗಿದ್ದೇನೆ ಎಂದರು.
ಸಾಹಿತ್ಯ ಪರಿಷತ್ ಒಂದು ಸಂಸ್ಥೆಯಾಗಿ ನೋಡದೇ ಇಡೀ ಕನ್ನಡಿಗರ ಅಸ್ಮಿತೆಯಾಗಿ ರೂಪಿಸುವ ಪ್ರಾಮಾಣಿಕ ಆಶಯಗಳಿಗೆ ಪೂರಕವಾಗಿ ದುಡಿಯಲು ನಾನು ಈ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವೆ. ಪರಿಷತ್ತನ್ನು ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ, ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಬ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹನಮೇಶ ಉಪ್ಪಾರ, ಪತ್ರಕರ್ತ ಇರ್ಫಾನ್, ದುರಗೇಶ ಉಪ್ಪಾರ ಉಪಸ್ಥಿತರಿದ್ದರು.