ಹಗರಿಬೊಮ್ಮನಹಳ್ಳಿ : ಮನೆಗೆ ಬಾರದ ಪತ್ನಿಯನ್ನು ಕೊಲೆ ಮಾಡಿದ ಪತಿ, ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ಹೂವಿನಹಡಗಲಿಯ ಜಿಪಂ ಉಪ ವಿಭಾಗೀಯ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮನ್ಸೂರಾ ನೂರ್ ಆಸ್ಮಾ(30) ಎಂಬುವವರೇ ಕೊಲೆಯಾದ ದುರ್ದೈವಿ.
ಮೃತ ಮಹಿಳೆ, ಬಲ್ಲಾ ಹುಣ್ಸಿಯ ಶಫಿ ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರ ಪತಿ, ಕೆಲಸ ತೊರೆದು ನನ್ನೊಂದಿಗೆ ಹಗರಿಬೊಮ್ಮನಹಳ್ಳಿಗೆ ಬರುವಂತೆ ಹೇಳಿದ್ದ. ಇದಕ್ಕೆ ಆಸ್ಮಾ ಒಪ್ಪಿರಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಕೊನೆಗೆ ಡಿವೋರ್ಸ್ ಪಡೆಯುವ ನಿರ್ಧಾರಕ್ಕೂ ಇಬ್ಬರೂ ಬಂದಿದ್ದರು.
ಇದರಿಂದ ಕೋಪಗೊಂಡಿದ್ದ ಶಫಿ, ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ, ಮಹಿಳೆಯ ಮನವೊಲಿಸಿ ಮನೆಗೆ ಕರೆ ತಂದು, ಪತ್ನಿಯ ವೇಲ್ ನಿಂದಲೇ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಆ ನಂತರ ಇದು ಸಹಜ ಸಾವು ಎಂದು ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದ. ಆನಂತರ ವಿಚಾರಣೆ ಸಂದರ್ಭದಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.