ದೆಹಲಿ: ಕೇಂದ್ರ ಸರ್ಕಾರದ ನೌಕರರು ತುರ್ತು ಸಮಯದಲ್ಲಿ ಸಿಜಿಹೆಚ್ಎಸ್ ಅಂದರೆ ಕೇಂದ್ರ ಸರ್ಕಾರ ಸೂಚಿಸಿರುವ ಆಸ್ಪತ್ರೆಗಳ ಹೊರತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ನೌಕರರ ಹಕ್ಕಿನ ಅನ್ವಯ ಸರ್ಕಾರದಿಂದ ಮೆಡಿಕ್ಲೇಮ್ ಪಡೆಯಬುದು ಎಂದು ಹೇಳುವ ಮೂಲಕ ಸರ್ಕಾರಿ ನೌಕರರಿಗೆ ಸುಪ್ರೀಂ ಸಿಹಿ ಸುದ್ದಿ ನೀಡಿದೆ.
ಕೇಂದ್ರ ಸರ್ಕಾರ ನೌಕರರು, ಪೀಂಚಣಿದಾರರು ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಎಂಬ ಕಾರಣಕ್ಕೆ ಸರ್ಕಾರ ಆರೋಗ್ಯ ವಿಮಾ ಸೌಲಭ್ಯವನ್ನು ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆರೋಗ್ಯ ವಿಮಾ ಸೌಲಭ್ಯ ಪಡೆಯುವುದು ಸರ್ಕಾರಿ ನೌಕರನ ಹಕ್ಕು. ಈ ಹಕ್ಕನ್ನು ಸರ್ಕಾರ ಕಸಿಯುವಂತಿಲ್ಲ. ನೌಕರ ದಾಖಲೆ ನೀಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಕುರಿತು ಪರಿಶೀಲನೆ ನಡೆಸಿ ಚಿಕಿತ್ಸಾ ವೆಚ್ಚವನ್ನು ನೀಡಬಹುದು ಎಂದು ಸುಪ್ರೀಂ ತಿಳಿಸಿದೆ.
ಸುಪ್ರೀಂ ಕೋರ್ಟ್ ಈ ತೀರ್ಪಿನಿಂದ ಸರ್ಕಾರಿ ನೌಕರರು ನಿಟ್ಟುಸಿರುಬಿಡುವಂತಾಗಿದೆ. ಈ ಮೊದಲು ಯಾವುದೇ ಖಾಯಿಲೆ ಇರಲಿ ಸರ್ಕಾರದಿಂದ ಚಿಕಿತ್ಸಾವೆಚ್ಚವನ್ನು ಪಡೆಯಬೇಕೆಂದಿದ್ದರೆ ಸಿಜಿಹೆಚ್ಎಸ್ ಸೂಚಿಸಿದ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕಿತ್ತು. ಕೆಲವೊಮ್ಮೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಬಂದರೆ ಆರೋಗ್ಯ ವಿಮಾ ಸೌಲಭ್ಯವಿದ್ದರೂ ಆ ಚಿಕಿತ್ಸಾ ಮೊತ್ತ ಸರ್ಕಾರಿ ನೌಕರನಿಗೆ ಹೊರೆಯಾಗುತ್ತಿತ್ತು. ಆದರೆ ಸುಪ್ರೀಂ ಕೋರ್ಟ್ ನ ಈ ತೀರ್ಪು ಈಗ ಸರ್ಕಾರಿ ನೌಕರರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಸಂಪೂರ್ಣ ರೀತಿಯಲ್ಲಿ ಪಡೆಯಲು ನೆರವಾಗಲಿದೆ.