ಲಕ್ಷ್ಮೇಶ್ವರ: ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಶಿರಹಟ್ಟಿ ವೃತ್ತ ಸಿಪಿಐ ವಿಕಾಶ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮೂಹ ಮೋಜು ಮಸ್ತಿಯ ಗೀಳಿಗೆ ಬಿದ್ದು, ಕಾನೂನು ಪರಿಪಾಲನೆಯ ಅರಿವಿಲ್ಲದೆ ಜೀವನ ಹಾಳು ಗೆಡವಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ನಮ್ಮದೇಶದ ಕಾನೂನಿಗೆ ಗೌರವಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು ಎಂದು ಹೇಳಿದರು.
ಯುವಸಮೂಹ ಕಾನೂನು ಪರಿಪಾಲನೆಯ ಕಡೆಗೆ ಗಮನ ಹರಿಸಿ ಸಮಾಜದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆ ತಡೆಯುವಂತಾರಾಗಬೇಕು ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು.
ಅಪರಾದ ನಡೆಯುವ ಮುನ್ನವೇ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಪರಾದ ತಡೆ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಪಿಎಸ್ಐ ಶಿವಯೋಗಿ ಲೊಹಾರ ಮಾತನಾಡಿ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವಂತಹ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ನೀಡುವಂತಹ ತಿಂಡಿ ತಿನಿಸುಗಳನ್ನು ಸ್ವೀಕರಿಸಬಾರದು. ಒಂಟಿ ಪ್ರಯಾಣ ಕಾಡು ಪ್ರದೇಶ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಂತಹ ವಿದ್ಯಾರ್ಥಿಗಳು ಜಾಗೃತರಾಗಿದ್ದು, ಪೋಷಕರು ಇಲ್ಲವೇ ನಂಬಿಕಸ್ಥ ಜನರ ಜೊತೆ ಪ್ರಯಾಣಿಸಬೇಕು. ಒಂಟಿ ಮನೆಗಳು ಅಥವಾ ತೋಟದ ಮನೆ ಮಾಲಿಕರು ಬಂದೂಕು ಲೈಸೆನ್ಸ್ ಪಡೆದು ಖರೀದಿಸಿ ಎಚ್ಚರಿಕೆ ವಹಿಸಿ ಸಮಾಜ ಘಾತುಕ ಕೆಲಸಗಳಿಂದ ದೂರವಿರಬೇಕು ಎಂದರು.
ದೈವ ಮತ್ತು ದೇವರ ಪೂಜೆ ಅಂತ ವಂಚಿಸುವ ತಂಡಗಳ ಬಗ್ಗೆ ಮತ್ತು ಕಡಿಮೆ ದರದಲ್ಲಿ ಮನೆಯ ಸಾಮಾನು ಸರಬರಾಜು ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಬ್ಬ ಹರಿದಿನ ಮತ್ತು ಸಮಾರಂಭಗಳಿಗೆ ತೆರಳುವ ವೇಳೆ ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನ ಮಾಡಬಾರದು. ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ತಿಂಗಳಿಗೊಮ್ಮೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಪಿಎಸ್ಐ ಬಡಿಗೇರ, ಶಂಕ್ರಪ್ಪ ಲಮಾಣಿ, ರಮೇಶ ಲಮಾಣಿ, ಲಕ್ಷ್ಮಣ ಪೂಜಾರ, ಟಾಕ್ರಪ್ಪ ಲಮಾಣಿ, ಫಕ್ಕೀರಪ್ಪ ಲಮಾಣಿ, ಸೋಮಲಪ್ಪ ಲಮಾಣಿ, ಪರಮೇಶ ಲಮಾಣಿ ಸೇರಿದಂತೆ ಗ್ರಾಮದ ಹಿರಿಯರು, ಯುವಕ ಮಿತ್ರರು ಭಾಗಿಯಾಗಿದ್ದರು.