ಲಕ್ಷ್ಮೇಶ್ವರ: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.
ಪರಿಣಾಮವಾಗಿ ಜನರು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಮಳೆಯ ನೀರನ್ನು ಹೊರ ಹಾಕಿದ್ದಾರೆ. ಆದರೆ, ಜನರು ಇಷ್ಟೊಂದು ಸಂಕಷ್ಟದಲ್ಲಿದ್ದರೂ ಗ್ರಾಮದ ವಡ್ಡರ ಪಾಳ್ಯಕ್ಕೆ ಗ್ರಾಪಂನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ. ಈ ಗ್ರಾಮದಲ್ಲಿ ಉತ್ತಮ ರಸ್ತೆಗಳು ಹಾಗೂ ಚರಂಡಿ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೂ ಸ್ಥಳೀಯ ಆಡಳಿತ ಸಂಸ್ಥೆಗಳಾಗಲಿ, ಶಾಸಕರಾಗಲಿ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಗ್ರಾಮದಲ್ಲಿ ಸಮರ್ಪಕ ರಸ್ತೆಗಳಲ್ಲಿ. ಹೀಗಾಗಿ ದೊಡ್ಡ ಮಳೆಯಾದರೆ ಸಾಕು, ಮನೆಗಳಿಗೆ ನೀರು ನುಗ್ಗುತ್ತದೆ. ನಮ್ಮ ಸಮಸ್ಯೆಗಳನ್ನು ಶಾಸಕರಿಗೆ ಎರಡ್ಮೂರು ಸಾರಿ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ವಡ್ಡರ್ ಪಾಳ್ಯದ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೇ, ಅವರು ಗ್ರಾಪಂಗೆ ಸರಿಯಾಗಿ ಬರುತ್ತಿಲ್ಲ. ಗ್ರಾಮದ ಪ್ರತಿಯೊಂದು ಓಣಿಯಲ್ಲಿಯೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಭೂವಿ ಸಮಾಜದ ಎಲ್ಲಾ ಓಣಿಯಲ್ಲಂತೂ ಜನರ ಕಷ್ಟ ಹೇಳತೀರದಾಗಿದೆ. ಆದರೆ, ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮದಲ್ಲಿನ ಅನೇಕ ಓಣಿಯ ರಸ್ತೆಗಳು ತಗ್ಗು ಗುಂಡಿಗಳಿಂದ ಕೊಡಿದ್ದು, ಸರಾಗವಾಗಿ ನೀರು ಹರಿಯಲು ಸ್ಥಳ ಇಲ್ಲದಾಗಿದೆ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದರೆ ಚರಂಡಿಯ ವ್ಯವಸ್ಥೆ ಇಲ್ಲದೆ ಕೆಲವೊಂದರ ಮನೆಗೆ ಗಲಿಜಿನೊಂದಿಗೆ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಸುಮಾರು ಮೂರು ಅಡಿಗಳಷ್ಟು ನೀರು ಮನೆಯ ನೆಲ ಮಹಡಿಯಲ್ಲಿ ನಿಂತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಓಣಿಗಳಿಗೆ ಮೂಲ ಸೌಲ್ಯಭದ ಕೊರತೆ ಇದೆ ಎಂದು ಗ್ರಾಪಂಗೆ ಹಾಗೂ ಶಾಸಕರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದುವರೆಗೂ ಯಾರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಓಣಿಗಳ ಜನರ ಜೀವನ ಚಿಂತಾಜನಕವಾಗಿದೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮೂಲಸೌಲ್ಯದ ಕೊರತೆಯನ್ನು ಸರಿಪಡಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.
ಆದರಳ್ಳಿಯ ಜನರ ಸಂಕಷ್ಟದ ಬದುಕಿನ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿ ನಾಳೆ ಉತ್ತರಪ್ರಭ ಯೂಟ್ಯೂಬ್ ಚಾನಲ್ ನಲ್ಲಿ ಸಿಗಲಿದೆ.