ನರೇಗಲ್: ಆರೋಗ್ಯವಂತ ಯುವಕ ಯುವತಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆಂದು ಐಎಂಎ ಬ್ಲಡ್ ಬ್ಯಾಂಕ್ನ ವೈದ್ಯಾಧಿಕಾರಿ ಆರ್.ಟಿ. ಪವಾಡಶೆಟ್ಟರ್ ಹೇಳಿದರು.
ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಗದಗ ನಗರದ ಐಎಂಎ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಸಮೀಪದ ಜಕ್ಕಲಿ ಗ್ರಾಮದ ಚಾವಡಿಯಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಎಲ್ಲ ದಾನಿಗಳಿಂದ ಪಡೆದ ರಕ್ತವನ್ನು ಕೇವಲ 35 ದಿನ ಮಾತ್ರ ಉಪಯೋಗಿಸಲು ಸಾಧ್ಯ. ಅದನ್ನು ಅದೇ ರಕ್ತದ ಗುಂಪಿನ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ ಮತ್ತೆ 3 ತಿಂಗಳಲ್ಲಿ ಪುನಃ ಉತ್ಪತ್ತಿಯಾಗುತ್ತದೆ ದಾನಿಯ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗಲಾರದ ಎಂದು ಮಾಹಿತಿ ನೀಡಿದರು.
ಮಾಜಿ ತಾ.ಪಂ ಸದಸ್ಯ ಎಂ. ಎಂ.ಮೇಟಿ ಮಾತನಾಡಿ, ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗುವುದಿಲ್ಲ. ರಕ್ತದಾನಿಗಳು ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತದೆ. ಜತೆಗೆ ಹೃದಯಾಘಾತದ ಸಂಭವ ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ರಕ್ತದಾನ ಮಾಡಲು ಹಿಂಜರಿಯಬಾರದು. ಈ ಬಗ್ಗೆ ಯುವಕರು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಶಿಬಿರದಲ್ಲಿ ಯುವಕ, ಯುವತಿಯರು ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ವಿ.ಎಸ್.ಎಸ್ ಬ್ಯಾಂಕ್ಯನ ಅಧ್ಯಕ್ಷ ವಿಜಯಕುಮಾರ್ ಮೇಟಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಬಿ.ವಾಲಿ, ಗ್ರಾಮದ ಹಿರಿಯ ಸಂಗಮೇಶ ಮೆಣಸಿಗಿ, ವಿವೇಕಾನಂದ ಸಂಘದ ಅಧ್ಯಕ್ಷ ವಿದ್ಯಾಧರ ಶಿರಗುಂಪಿ, ಬಾಬು ಮೆಣಸಗಿ, ಸಂಗಮೇಶ ವಾಲಿ, ಪ್ರಶಾಂತ ಕೋರಿ, ಅನಿಲ ಕಿಟಗೇರಿ, ನಾಗರಾಜ ಕಡಗದ ಭಾಗವಹಿಸಿದ್ದರು.