ಶಿರಹಟ್ಟಿ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಇಳಿಕೆ ಕ್ರಮದಲ್ಲಿ ಸಾಗುತ್ತಿದ್ದು, ಇದಕ್ಕೆ ಶಿಕ್ಷಕರ ಅಪೂರ್ಣತೆಯೇ ಮೂಲ ಕಾರಣ ಎಂದು ಡಿಡಿಪಿಐ ಬಸವಲಿಂಗಪ್ಪ ಹೇಳಿದರು.
ಸ್ಥಳೀಯ ಡಿ.ದೇವರಾಜ ಅರಸು ಸಭಾಭವನದಲ್ಲಿ ಬುಧವಾರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರಿಗಾಗಿ ನಡೆದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಲೋಪದೋಷಗಳಿಲ್ಲ. ವಿದ್ಯಾರ್ಥಿಗಳು ಶಿಕ್ಷಕರ ಶಿಕ್ಷಕ ಎಂದು ಹೇಳಬಹುದುಗಾಗಿದ್ದು, ಶಿಕ್ಷಕರು ಪಾಠ ಬೋಧನೆಯಲ್ಲಿ ಪರಿಪೂರ್ಣತೆ ಹೊಂದಿದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಸರಿಯಾದ ಕಲಿಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕರ ಬೇಜವ್ದಾರಿತನದಿಂದ ಮಕ್ಕಳು ಅದೇ ಹಾದಿಯಲ್ಲಿ ಸಾಗುತ್ತಿದ್ದು, ಶಿಕ್ಷಕರು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಶಾಲೆಯಲ್ಲಿ ಹಾಜರಿರಬೇಕು. ರಜೆ ಬೇಕಾದರೆ ಕಡ್ಡಾಯವಾಗಿ ಅರ್ಜಿ ಮುಖಾಂತರ ಸಲ್ಲಿಸಬೇಕು. ಅದನ್ನು ಬಿಟ್ಟು ಕೇವಲ ದೂರವಾಣಿ ಮೂಲಕ ಹೇಳಿದರೆ ಮುಖ್ಯೋಪಾಧ್ಯಯರು ರಜೆ ಮಂಜೂರು ಮಾಡಬಾರದು. ಇದಕ್ಕೆ ಅನುಗುಣವಾಗಿ ಆದೇಶವಿದ್ದು ಕಡ್ಡಾಯವಾಗಿ ಇದು ಪಾಲನೆಯಾಗಬೇಕು ಎಂದು ಹೇಳಿದರು.
ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದ್ದು, ಕಡಿಮೆ ಫಲಿತಾಂಶ ಮಾಡಿ ಬೀಗುವ ಬದಲು ಬಾಗಿ ಪಾಠ ಬೋಧನೆ ಮಾಡಬೇಕು. ವಿಷಯದಲ್ಲಿ ಪರಿಣಿತಗೊಂಡು ಮಕ್ಕಳ ಮನಸ್ಸಿನ ಆಳಕ್ಕಿಳಿದು ಪಾಠ ಬೋಧನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಪಲಿತಾಂಶ ಸುಧಾರಣೆಯಾಗಲು ಸಾಧ್ಯ ಆಗುತ್ತದೆ ಎಂದು ಹೇಳಿದರು.
ಡಿಡಿಪಿಐ ಅವರೆ ಒಪ್ಪಿಕೊಂಡಂತೆ
ಡಿಡಿಪಿಐ ಅವರ ಈ ಮಾತಿನಿಂದ ಇದೀಗ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯ ವಿಚಾರ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಇನ್ನು ಮುಖ್ಯವಾಗಿ ಸ್ವತ: ಡಿಡಿಪಿಐ ಅವರೆ ಫಲಿತಾಂಶ ಇಳಿಕೆಗೆ ಶಿಕ್ಷಕರ ಅಪೂರ್ಣತೆಯೆ ಕಾರಣ ಎಂದು ಒಪ್ಪಿಕೊಂಡಿರುವುದು ಮಾತ್ರ ಅಚ್ಚರಿಯ ಸಂಗತಿ. ಇನ್ಮುಂದೆ ನಿಗದಿತ ಸಮಯಕ್ಕೆ ಶಾಲೆಗೆ ಬರುವುದು ಹಾಗು ರಜೆ ಅರ್ಜಿ ಸಲ್ಲಿಸಿಯೇ ಶಾಲೆಗೆ ಗೈರಾಗಬೇಕು. ದೂರವಾಣಿ ಮೂಲಕ ರಜೆ ಕೇಳಿದರೆ ಸಾಲದು ಎಂದು ಖಡಕ್ ಸೂಚನೆ ನೀಡಿದರು. ಆದರೆ ಇಷ್ಟು ದಿನ ಕೆಲವು ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಬಾರದೆ ಇರುವುದು, ರಜೆ ಹೇಳದೇ ಶಾಲೆಗೆ ಗೈರಾಗುತ್ತಿದ್ದರೆ? ಎನ್ನುವುದು ಪ್ರಶ್ನೆಯಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ಜಿ.ಡಿ.ದಾಸರ, ಎಂ.ಬಿ.ಹೊಸಮನಿ, ಶರಣು ಗೋಗೇರಿ, ಪಿ.ಜಿ.ಯಲವಿಗಿ, ಇಓ ನಿಂಗಪ್ಪ ಓಲೇಕಾರ, ವೈ.ಎಸ್.ನದಾಫ್, ಶರೀಫ್ಸಾಬ ನದಾಫ್, ರವಿ ಬೆಂಚಳ್ಳಿ, ಎಂ.ಕೆ.ಲಮಾಣಿ, ಎಂ.ಎ.ಮಕಾಂದಾರ ಮುಂತಾದವರು ಉಪಸ್ಥಿತರಿದ್ದರು.