ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ವನಶ್ರೀ ಸ್ಟೋನ್ ಕ್ರಷರ್ನಿಂದ ಸುತ್ತಮುತ್ತಲಿನ ರೈತರಿಗೆ ತೊಂದರೆ ಆಗುತ್ತಿದೆ ಎಂದು ರೈತರು ಆರೋಪಿಸಿದರು.
ಈ ಕುರಿತು ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ ಲಕ್ಷ್ಮಣ ಲಮಾಣಿ, ಶಿವಪ್ಪ ಲಮಾಣಿ, ಬಸವರಾಜ ವಡ್ಡರ, ಆರ್.ಟಿ. ಲಮಾಣಿ, ಉಮಲೆಪ್ಪ ಲಮಾಣಿ, ಯಲ್ಲಪ್ಪ ಸಂಕದಾಳ, ಖೇಮಪ್ಪ ಲಮಾಣಿ, ಕ್ರಷರ್ನಿಂದ ಹೊರಡುವ ಧೂಳು ಮತ್ತು ರಾಸಾಯನಿಕ ಪದಾರ್ಥಗಳಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ ಎಂದು ತಿಳಿಸಿದ್ದಾರೆ.
ರೈತರು ಕೊಳವೆ ಬಾವಿಗಳು ಬಂದ್ ಆಗಿವೆ. ಕಲ್ಲಿನ ಗುಡ್ಡಗಳನ್ನು ಸಿಡಿಸಿದಾಗ ಅಪಾರ ಪ್ರಮಾಣದ ರಾಸಾಯನಿಕಯುಕ್ತ ಹೊಗೆ ಬರುತ್ತದೆ. ಸಹಿಸಲಸಾಧ್ಯ ಶಬ್ದ ಬರುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸುತ್ತಮುತ್ತಲಿನ ಹೊಲಗಳಲ್ಲಿ ಕಲ್ಲಿನ ತುಂಡುಗಳು ಸಿಡಿದು ಬೀಳುತ್ತವೆ ಎಂದು ಮನವಿಯಲ್ಲಿ ದೂರಿದ್ದಾರೆ.
ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳ ಬಳಿ ಹೋದರೆ
ನಮ್ಮನ್ನೇ ಬೈದು ಕಳುಹಿಸುತ್ತಿದ್ದಾರೆ. ಒಂದು ವಾರದೊಳಗೆ ಪರಿಹಾರ ದೊರಕಿಸುವುದರೊಂದಿಗೆ ಹಾಳಾದ ಕೊಳವೆ ಬಾವಿಗಳಿಗೆ ಸೂಕ್ತ ಪರಿಹಾರವನ್ನೂ ನೀಡಬೇಕು. ಇಲ್ಲದಿದ್ದರೆ ಸ್ಥಳದಲ್ಲೇ ಉಪವಾಸ ಸತ್ಯಾಗ್ರಹ ಕೈಗೊಂಡು ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ.