ನರೇಗಲ್: ಉಪಕಾರ ಸ್ಮರಣಯೇ ಜನ್ಮದಿನವಾಗಿರುತ್ತದೆ. ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆಯನ್ನು ಕಟ್ಟುವುದು ಅಸಾಧ್ಯವಾದ ಮಾತಾಗಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ಅವರು ಶನಿವಾರ ಹಾಲಕೆರೆ ಸಂಸ್ಥಾನಮಠದ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ 84ನೇ ಹುಟ್ಟು ಹಬ್ಬದ ಪ್ರಯುಕ್ತ ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದರು.
ನನಗೆ ಕಾವಿ ಬಟ್ಟೆ ಹಾಕಿಸಿದ ಹಾಲಕೆರೆ ಪರಮಪೂಜ್ಯರ ಬಗ್ಗೆ ನನಗೆ ಅಪಾರ ಗೌರವವಿದೆ. ತಮ್ಮ ಅಪಾರ ಜ್ಞಾನದ ಮೂಲಕ ಈ ಭಾಗದ ಜನರಿಗೆ ಬೆಳಕನ್ನು ನೀಡುತ್ತಿದ್ದಾರೆ. ಜನತೆಯಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಮಠಾಧೀಶರನ್ನು ಪಡೆದ ನಾವೇ ಧನ್ಯರು ಎಂದು ಹೇಳಿದರು.
ಕೊರೊನಾದ ಸಂಕಷ್ಟದಲ್ಲಿ ಸಾಕಷ್ಟು ಜನರು ಜನರ ನೆಮ್ಮದಿಗಾಗಿ ಹೋರಾಡಿದರು. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯೋಧರಂತೆ ಹೋರಾಡಿದ ಪ್ರತಿಯೊಬ್ಬರು ಜನರನ್ನು ಕಾಯುವ ಯೋಧರಿಗೆ ಸಮಾನರು ಎಂದು ಹೇಳಿದರು.
ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ವೈ.ಸಿ.ಪಾಟೀಲ ಮಾತನಾಡಿ, ಕೋವಿಡ್– 19 ಮಹಾಮಾರಿಯಿಂದ ಜಗತ್ತಿನಲ್ಲಿ ಸಾಕಷ್ಟು ಸಾವು ನೋವುಗಳು ಜರುಗಿವೆ. ಜಗತ್ತಿನ ಮುಂದುವರೆದ ರಾಷ್ಟ್ರಗಳು ಕೊರೊನಾ ವಿರುದ್ಧ ಹೋರಾಡಲು ಪರದಾಡಿದ ಸಂದರ್ಭದಲ್ಲಿ ಆರ್ಥಿಕವಾಗಿ ನಮ್ಮ ದೇಶ ಹಿಂದುಳಿದಿದ್ದರೂ ಸಹ ಕೊರೊನಾದ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಇಂತಹ ಮಠ ಮಾನ್ಯರ ಆಶೀರ್ವಾದ, ಕೊರೊನಾ ವಾರಿಯರ್ಸಗಳ ಮಾರ್ಗದರ್ಶನ ನಮಗೆ ಸಹಕಾರಿಯಾಗಿದೆ. ಪ್ರತಿ ಕೊರೊನಾ ವಾರಿಯರ್ಸ್ಗೆ ಧನ್ಯವಾದ ಹೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಹಾಲಕೆರೆ ಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಜಿ.ಸೋಮನಕಟ್ಟಿ, ಆಡಳಿತಾಧಿಕಾರಿ ಎಸ್.ಜಿ.ಹಿರೇಮಠ, ಪದವಿ ಪ್ರಾಚಾರ್ಯ ಎಸ್.ಎಸ್.ಜಿ.ಕೇಶಣ್ಣವರ, ಸಿಬ್ಬಂದಿಗಳು ಹಾಗೂ ಇತರರು ಇದ್ದರು.