ಶಿರಹಟ್ಟಿ: ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಹಿಂದ ಸಂಘದ ಕಾರ್ಯದರ್ಶಿ ಸಂತೋಷ ಕುರಿ ಮಾತನಾಡಿ, ಈಗಾಗಲೇ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದ್ದು, ಇದನ್ನು ಸ್ಥಗಿತಗೊಳಿಸುವುದರಿಂದ ಹಲವಾರು ವರ್ಷಗಳಿಂದ ಇಲ್ಲಿ ದುಡಿದು ನೆಮ್ಮದಿಯ ಬದುಕು ನಡೆಸುತ್ತಿದ್ದ ನಮ್ಮ ಜೀವನ ನಿಜಕ್ಕೂ ಬೀದಿಪಾಲಾಗುತ್ತದೆ. ಕೂಲಿ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಈ ಕೂಡಲೇ ಬ್ಲಾಕ್ 3 ಮತ್ತು 4 ಅರಣ್ಯ ಕ್ಷೇತ್ರ ಕೈಬಿಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಚಂದ್ರಶೇಖರ ಜೋಗೇರ, ಗೂಳಪ್ಪ ಕರಿಗಾರ, ಯಲ್ಲಪ್ಪ ಪೂಜಾರ, ಶಿವು ಕಲ್ಯಾಣಿ, ಹನುಮರಡ್ಡಿ ಮದಗುಣಕಿ, ಮಹೇಶ ಡಂಬಳ, ಪರಶು ಹಾಲಪ್ಪನವರ, ಚೋಟು ಮಾರವಾಡಿ, ನೀಲಪ್ಪ ಖಾನಾಪೂರ, ಮಲ್ಲೇಶ ವರವಿ, ಚನ್ನಪ್ಪ ಸ್ವಾಮಿ, ಶಿವಪ್ಪವಡ್ಡರ, ಚಂದ್ರು ಹಾಲಪ್ಪನವರ ಮುಂತಾದವರು ಉಪಸ್ಥಿತರಿದ್ದರು.