ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ವೈರಸ್ ಗೆ ಸುಮಾರು 2 ಕೋಟಿ ಜನರಿಗೆ ತಗುಲಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಸೆ. 16ರವರೆಗೆ ಕನಿಷ್ಠ 1.93 ಕೋಟಿ ಅಥವಾ ಶೇ. 27.3ರಷ್ಟು ಜನರಿಗೆ ಸೋಂಕು ತಗುಲಿದೆ ಎಂದು ಸರ್ಕಾರ ಈ ಅಂಕಿ – ಅಂಶವನ್ನು ಬಹಿರಂಗ ಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಮಾತನಾಡಿ, ಈ ಸರ್ವೆ 2020ರ ಸೆ. 3 ರಿಂದ 16 ರವರೆಗೆ ನಡೆದಿದೆ. ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ.
ರಾಜ್ಯದಲ್ಲಿ ಮರಣ ಪ್ರಮಾಣ ಶೇ. 0.05 ಇದೆ. ಮುಂಬಯಿನಲ್ಲಿ ಶೇ. 0.05 ರಿಂದ ಶೇ. 0.10, ಪುಣೆಯಲ್ಲಿ ಶೇ. 0.08, ದೆಹಲಿಯಲ್ಲಿ ಶೇ. 0.09, ಚೆನ್ನೈನಲ್ಲಿ ಶೇ. 0.13ರಷ್ಟು ಮರಣ ಪ್ರಮಾಣವಿದೆ ಎಂದು ಹೇಳಿದ್ದಾರೆ. ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.