ರಾಯಚೂರು : ರಾಜ್ಯ ಸರ್ಕಾರಕ್ಕೆ ಮಾನವೀಯತೆ ಇಲ್ಲ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಚುನಾವಣಾ ಪ್ರಚಾರ ನಡೆಸಿದ ಅವರು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಸದ್ಯ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬಳಿ ಹೆಲಿಕಾಪ್ಟರ್ ಇದೆ. ಜೆಡಿಎಸ್, ಕಾಂಗ್ರೆಸ್ಸಿನವರು ಹೆಲಿಕಾಪ್ಟರಿನಲ್ಲಿಯೇ ಬರುತ್ತಾರೆ ಎಂದು ಆರೋಪಿಸಿದ್ದಾರೆ.
ರಾಜ್ಯವನ್ನು ಕೇಂದ್ರ ಸರ್ಕಾರ, ಗುಲಾಮರ ರೀತಿ ನೋಡುತ್ತಿದೆ. ಪ್ರಧಾನಿ ಎಲ್ಲ ಕಡೆಗೆ ಹೋದರೂ ರಾಜ್ಯದತ್ತ ಮುಖ ಮಾಡುತ್ತಿಲ್ಲ. ನಮ್ಮಲ್ಲಿನ ಸಂಸದರು ದನಕಾಯುತ್ತಿದ್ದಾರೆಯೇ? ಇವರು ಪ್ರಧಾನಿಯನ್ನು ನಮ್ಮ ರಾಜ್ಯಕ್ಕೆ ಏಕೆ ಕರೆದುಕೊಂಡು ಬರುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ರೂ. 50 ಸಾವಿರ ಕೋಟಿ ಪರಿಹಾರ ನೀಡಬೇಕು. ಅ.29 ರಂದು ಸಂಸದರನ್ನು ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹರಾಜು ಹಾಕಿ ಪ್ರತಿಭಟನೆ ಮಾಡುತ್ತೇವೆ. ಕೊಳ್ಳುವವರು ಬಂದು ಕೊಳ್ಳಬಹುದು. ಈ ರೀತಿ ವಿನೂತನ ಪ್ರತಿಭಟನೆ ಕೈಗೊಂಡು ಕೇಂದ್ರ ಸರ್ಕಾರದ ಧೋರಣೆ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.