ಲಕ್ಷ್ಮೇಶ್ವರ: ದಶಕದಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿರುವ ಆದ್ರಳ್ಳಿಯ ವಡ್ಡರಪಾಳ್ಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಡಳಿತ ವರ್ಗ ಮುಂದಾಗಬೇಕು. ಈ ಬಗ್ಗೆ ಶಾಸಕ ರಾಮಣ್ಣ ಲಮಾಣಿ ಶೀಘ್ರ ಇಲ್ಲಿನ ಜನರ ಬವಣೆ ನೀಗಿಸಲು ಮುಂದಾಗಬೇಕು ಇಲ್ಲವಾದಲ್ಲಿ ಹೋರಾಟದ ಹಾದಿ ಅನಿವಾರ್ಯ ಎಂದು ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಎಚ್ಚರಿಕೆ ನೀಡಿದರು.
ಇಂದು ಆದ್ರಳ್ಳಿ ಗ್ರಾಮದ ವಡ್ಡರಪಾಳ್ಯಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಮಾತನಾಡಿದರು.
ಈಗಾಗಲೇ ದಶಕದಿಂದ ಲಕ್ಷ್ಮೇಶ್ವರ ತಾಲೂಕಿನ ಆದ್ರಳ್ಳಿ ಗ್ರಾಮದ ವಡ್ಡರಪಾಳ್ಯ ಜನರು ಮಳೆಯಾದ್ರೆ ಸಾಕು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಚರಂಡಿ ನೀರು ಮನೆಗೆ ನುಗ್ಗುತ್ತಿದೆ. ಮಳೆ ನೀರು ಒಂದೆಡೆ ಸಂಗ್ರಹಗೊಂಡ ಪರಿಣಾಮ ಮನೆಯಲ್ಲಿ ಅಂತರ್ಜಲದಿಂದ ನೀರು ಜಿನುಗುತ್ತಿದೆ. ಹತ್ತು ವರ್ಷದಿಂದ ಕನಿಷ್ಟ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಮಳೆಯಾದ್ರೆ ಎಲ್ಲಿ ನೀರು ಮನೆಗೆ ನುಗ್ಗುತ್ತದೆಯೋ ಅಂತ ಆತಂಕದಿಂದ ನಿದ್ದೆಗೆಟ್ಟು ಕುಳಿತುಕೊಳ್ಳಬೇಕಿದೆ. ಆದರೆ ಈ ಬಗ್ಗೆ ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಇನ್ನಾದರೂ ಇಲ್ಲಿನ ಜನರಿಗೆ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು.
ಈ ವೇಳೆ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಇಲ್ಲಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆದರು. ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಈಗಾಗಲೇ ಇಲ್ಲಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನು ತಹಶೀಲ್ದಾರ್ ನೀಡಿದರು. ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ತಹಶೀಲ್ದಾರಿಗೆ ತಿಳಿಸಿದರು. ಈ ವೇಳೆ ಸ್ಥಳೀಯರು ಇದ್ದರು.