ಶಿವಮೊಗ್ಗ : ಎರಡನೇ ಪ್ರಿಯಕರನಿಂದ ಮೊದಲ ಪ್ರಿಯಕರನನ್ನು ಪ್ರೇಯಸಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿ ಸಮೀಪದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ಬಂಗಾರಮ್ಮ (60), ಪ್ರವೀಣ್ (35) ತಾಯಿ ಹಾಗೂ ಮಗನನ್ನು ಮಲಗಿದ್ದ ಸಂದರ್ಭದಲ್ಲಿಯೇ ಕೊಲೆ ಮಾಡಲಾಗಿತ್ತು. ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಕೊಲೆ ಮಾಡಲಾಗಿತ್ತು.
ಕೊಲೆಯಾದ ವ್ಯಕ್ತಿಗಳು ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದರು. ಅಲ್ಲದೇ, ಕೊಲೆಗಾರರು ಮನೆಯಿಂದ ಯಾವುದೇ ವಸ್ತುಗಳನ್ನು ಸಹ ತೆಗೆದುಕೊಂಡು ಹೋಗಿರಲಿಲ್ಲ. ಅಲ್ಲದೇ ಮನೆಯಲ್ಲಿಯೇ ಇದ್ದ ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನೂ ಮಾಡಿರಲಿಲ್ಲ. ಹೀಗಾಗಿ ಈ ಪ್ರಕರಣ ಬೇಧಿಸುವುದು ಪೊಲೀಸರಿಗೆ ತಲೆನೋವಾಗಿತ್ತು. ಆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಕೊಲೆಯಾದ ಪ್ರವೀಣನಿಗೆ ನೆರೆ ಮನೆಯ ನಿವಾಸಿ ಶೃತಿ ಜೊತೆ ಪ್ರೀತಿ ಇತ್ತು. ಆದರೆ, ಪ್ರವೀಣ, ಶೃತಿಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಶೃತಿ ಕೋಪಗೊಂಡಿದ್ದಳು. ಆ ನಂತರ ಶೃತಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು.
ಈ ವೇಳೆ ಶೃತಿಗೆ ಭರತ್ ಎಂಬ ಯುವಕನ ಪರಿಚವಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಪ್ರಿಯಕರನಿಂದ ತನಗಾದ ಅನ್ಯಾಯವನ್ನು ಹೊಸ ಪ್ರಿಯಕರ ಭರತ್ ನ ಮುಂದೆ ಹೇಳಿಕೊಂಡಿದ್ದಾಳೆ. ಅಲ್ಲದೇ, ಶೃತಿ ಹಾಗೂ ಪ್ರವೀಣ್ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿನ ಖಾಸಗಿ ವಿಷಯದ ವಿಡಿಯೋ ಪ್ರವೀಣ್ ಬಳಿ ಇತ್ತು. ವಿಡಿಯೋ ಇಟ್ಟುಕೊಂಡು ಪ್ರವೀಣ್ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಶೃತಿ ತನ್ನ ಹೊಸ ಪ್ರಿಯತಮ ಭರತ್ ನ ಸಹಾಯ ಪಡೆದು ಆತನಿಂದಲೇ ಪ್ರವೀಣ್ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳ ಮಹಜರ್ ಗೆ ಆರೋಪಿಗಳನ್ನು ಕರೆದಕೊಂಡು ಹೋಗಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಆರೋಪಿ ಪ್ರಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಭರತ್ ಗುಂಡೇಟಿಗೆ ಬಲಿಯಾದವ. ಆರೋಪಿಯನ್ನು ಸದ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಶೃತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.