ತುಮಕೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ಸಂಜನಾ ಹಾಗೂ ರಾಗಿಣಿ ಅವರ ಜಾಮೀನಿಗೆ ಸಂಬಂಧಿಸಿದಂತೆ ಎನ್ಡಿಪಿಎಸ್ ಕೋರ್ಟ್ ನ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಹೊಸ ಟ್ವೀಸ್ಟ್ ಸಿಕ್ಕಿದೆ.
ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲೂಕು ಹಾಗಲವಾಡಿ ಮೂಲದ ವೇದಾಂತ ಈ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ದ್ವೇಷದಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ರಾಜಶೇಖರ್, ರಮೇಶ್ ಎಂಬ ವ್ಯಕ್ತಿಯ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಈ ಪತ್ರ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ.
ರಾಜಶೇಖರ್ ಹಾಗೂ ರಮೇಶ್ ಒಂದೇ ಕುಟುಂಬದ ಮಹಿಳೆಯರನ್ನು ಮದುವೆಯಾಗಿದ್ದರು. ಇಬ್ಬರ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಸು ಇತ್ತು. ಹೀಗಾಗಿ ರಮೇಶ್ ನನ್ನು ಸಿಲುಕಿಸುವ ನಿಟ್ಟಿನಲ್ಲಿ ರಾಜಶೇಖರ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ರಾಜಶೇಖರ್, ವೇದಾಂತ್ ನ ಸಹಾಯದಿಂದ ಪತ್ರ ಬರೆಯಿಸಿದ್ದ. ಆ ನಂತರ ಚೇಳೂರು ಅಂಚೆ ಕಚೇರಿಯಿಂದ ಪೋಸ್ಟ್ ಮಾಡಿದ್ದ. ರಾಜಶೇಖರ್, ಮಾವನ ಮನೆಯ ಆಸ್ತಿಗಾಗಿ ಅವರ ಇಬ್ಬರೂ ಮಕ್ಕಳನ್ನು ಮದುವೆಯಾಗಲು ನಿರ್ಧರಿಸಿದ್ದ.
ರಾಜಶೇಖರ್ ಆಸ್ತಿಗಾಗಿ ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ಕಳೆದ ವರ್ಷ ನಕಲಿ ಛಾಪಾ ಕಾಗದ ಸೃಷ್ಟಿ ಮಾಡಿ ರಮೇಶ್ ಹಾಗೂ ಮಾವನ ಮೇಲೆ ಆರೋಪ ಮಾಡಿದ್ದ. ಆಗ ಪೊಲೀಸರು, ರಾಜಶೇಖರ್ ಗೆ ಎಚ್ಚರಿಕೆ ನೀಡಿದ್ದರು.
ಕಳೆದ 9 ತಿಂಗಳ ಹಿಂದೆ ರಮೇಶ್ ಆ ಮನೆಯ ಇನ್ನೊಬ್ಬರು ಮಹಿಳೆಯನ್ನು ಮದುವೆಯಾಗಿದ್ದ. ಹೀಗಾಗಿ ರಾಜಶೇಖರ್, ರಮೇಶನ ವಿರುದ್ಧ ದ್ವೇಷ ಕಾರುತ್ತಿದ್ದ ಎಂದು ತಿಳಿದು ಬಂದಿದೆ.
ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಪ್ರಕರಣ ಬಳಸಿಕೊಂಡು ನ್ಯಾಯಾಧೀಶರಿಗೆ ಬಾಂಬ್ ಹಾಕುವ ಬೆದರಿಕೆ ಹಾಗಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.