ಶಿರಹಟ್ಟಿ: ತಾಲೂಕಿನ ಹೆಬ್ಬಾಳ ಗ್ರಾಮದ ಜನರ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಶನಿವಾರ ಹೆಬ್ಬಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಹೆಬ್ಬಾಳ ಗ್ರಾಮದ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸದೆ ಗಬ್ಬೆದ್ದು ನಾರುತ್ತಿವೆ ಎಂದರು.
ಗ್ರಾಮದ ಕೆಲವು ವಾರ್ಡ್ ಗಳಿಗೆ ವಿದ್ಯುತ್ ದೀಪದ ಸೌಲಭ್ಯವಿಲ್ಲ. ಇದರಿಂದ ಮಕ್ಕಳಿಗೆ ಹಾಗೂ ವೃದ್ದರಿಗೆ ರಾತ್ರಿವೇಳೆಯಲ್ಲಿ ಸಂಚಾರ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಗ್ರಾಮದ ಎಲ್ಲಾ ವಾರ್ಡಗಳಿಗೆ ಹಂಚಿಕೆಯಾಗಬೇಕು. ಆಶ್ರಯ ಮನೆಯ ಸಮಸ್ಯೆ ಕೊನೆಯಾಗಬೇಕು. ಉದ್ಯೋಗ ಖಾತ್ರಿ ಯೋಜನೆ ಗ್ರಾಮದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಬೇಡಿಕೆಗಳನ್ನು ವಾರದಲ್ಲಿ ಈಡೇರಿಸಬೇಕು. ಇಲ್ಲವಾದರೆ ತಾಲೂಕು ಪಂಚಾಯತಿ ಎದರು ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶರಣಪ್ಪ ಪುರ್ತಗೇರಿ, ದೇವೇಂದ್ರ ಶಿಂದೆ, ದೇವರಾಜ ಮೇಟಿ, ಸಂತೋಷ ಹಿರೇಮಠ ಹಾಗೂ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.