ರಾಮನಗರ : ನಾನು ಮುಳ್ಳಿನ ಮೇಲೆ ಬಟ್ಟೆ ಹಾಕಿ ದೊಡ್ಡ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಮುಳ್ಳಿನ ಮೇಲೆ ಬಟ್ಟೆ ಹಾಕಿದಂತಹ ಪರಿಸ್ಥಿತಿ ಜೆಡಿಎಸ್ ನದ್ದಾಗಿತ್ತು. ಸದ್ಯ ಈ ತಪ್ಪುಗಳಿಂದ ಹೊರ ಬಂದು, ನಾನೇ ಅದನ್ನು ಸರಿ ಪಡಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಹಳೆಯ ಸ್ನೇಹಿತರು ನನ್ನ ಕುರಿತು ಕೆಟ್ಟದ್ದಾಗಿ ಮಾತನಾಡುತ್ತಾರೆ. ಆದರೆ, ಅವರಂತೆಯೇ ನಾನು ಹಗುರವಾಗಿ ಮಾತನಾಡುವುದಿಲ್ಲ. ನಾನು ಅವರಿಗೆ ಯಾವ ಅನ್ಯಾಯ ಮಾಡಿಲ್ಲ. ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿ ಚೂರಿ ಹಾಕಿ ಹೋಗಿದ್ದಾರೆ. ಇಲ್ಲಿ ನನ್ನದೇ ತಪ್ಪು ಇದೆ. ನಾನು ಉತ್ತಮರ ಸಹವಾಸ ಮಾಡಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಈ ಹಿಂದೆ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ತಪ್ಪು ಮಾಡಿದ್ದೇನೆ. ಅಷ್ಟೆ ಅಲ್ಲದೇ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮ ಅವರೊಂದಿಗೆ ಕೈ ಜೋಡಿಸಿದ್ದು, ನನ್ನ ದೊಡ್ಡ ತಪ್ಪು ಎಂದು ಹೇಳಿದ್ದಾರೆ.