ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.
2016ರಲ್ಲಿ ಎಂ.ಎಸ್. ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಪರ ಆಡಿದ್ದರು. ಆ ಸಂದರ್ಭದಲ್ಲಿ ಚೆನ್ನೈ ತಂಡ ಬ್ಯಾನ್ ಆಗಿತ್ತು. ಅಕ್ಷರ್ ಪಟೇಲ್ ಅವರು ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿದ್ದರು. ಆ ವರ್ಷದ ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಪುಣೆ ತಂಡಕ್ಕೆ ಕೊನೆಯ ಓವರ್ ನಲ್ಲಿ 23 ರನ್ಗಳು ಬೇಕಿತ್ತು. ಕ್ರೀಜ್ ನಲ್ಲಿ ಮಹೇಂದ್ರಸಿಂಗ್ ಧೋನಿ ಇದ್ದರೆ, ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಆಗ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸುವ ಮೂಲಕ ಧೋನಿ 23 ರನ್ ಬಾರಿಸಿದ್ದರು.
ನಿನ್ನೆ ನಡೆದ ಪಂದ್ಯದಲ್ಲಿ ದೆಹಲಿಗೆ 17 ರನ್ ಬೇಕಿತ್ತು. ಜಡೇಜಾ ಕೊನೆಯ ಓವರ್ ಎಸೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಮೂರು ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಅಕ್ಷರ್ ಅವರ ಆಟಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಧೋನಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.