ಬೆಂಗಳೂರು : ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾರ್ಲ್ ಮಾರ್ಕ್ಸ್(25), ಶಿವಕುಮಾರ್(54), ಎಸ್ ಬಾಬು(40) ಬಂಧಿತರು ಎಂದು ತಿಳಿದು ಬಂದಿದೆ. ಬಿಬಿಎಂಪಿ ಮಾರ್ಷಲ್ ಮುನಿರಾಜು ಅವರೊಂದಿಗೆ ಗೋಕುಲದಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಗೋಕುಲ ಬ್ರಿಡ್ಜ್ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟಾರ್ಸ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಗ್ಯಾರೇಜ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವುದನ್ನು ಬಿಬಿಎಂಪಿ ಮಾರ್ಷಲ್ ಪ್ರಶ್ನಿಸಿದ್ದಾರೆ. ಆಗ ಗ್ಯಾರೇಜ್ ಬಳಿ ಇದ್ದ ಶಿವಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ಯಾರೇಜ್ ನಲ್ಲಿದ್ದ ಕಾರ್ಲ್ ಮಾರ್ಕ್ಸ್ ಎಂಬ ವ್ಯಕ್ತಿ, ನಮಗೇನು ಕೊರೊನಾ ಇದೆಯೇ? ನಾವು ಮಾಸ್ಕ್ ಹಾಕುವುದಿಲ್ಲ. ದಂಡವನ್ನೂ ಕಟ್ಟುವುದಿಲ್ಲ ಎಂದು ಪೊಲೀಸರನ್ನೇ ದಬಾಯಿಸಿದ್ದಾನೆ. ಗ್ಯಾರೇಜ್ ಮಾಲೀಕ ಬಾಬು ಎಂಬ ವ್ಯಕ್ತಿ ಬಂದು ಪೊಲೀಸರ ಕೈ ಹಿಡಿದುಕೊಂಡಿದ್ದಾನೆ. ಆಗ ಕಾರ್ಲ್ ಮಾರ್ಕ್ಸ್ ಪೊಲೀಸರ ಕೆನ್ನೆಗೆ ಬಾರಿಸಿದ್ದಾನೆ ಎಂದು ಪೊಲೀಸ್ ಎಎಸ್ ಐ ಅಶ್ವಥಯ್ಯ ಆರೋಪಿಸಿದ್ದಾರೆ.